ADVERTISEMENT

ಬರದ ನಾಡಲ್ಲಿ ಜಲಪಾತ; ಅಭಿವೃದ್ಧಿಗೆ ಒತ್ತಾಯ

ದೇವರಗುಡ್ಡದ ತಪ್ಪಲಿನಲ್ಲಿ ನೀರ ಧಾರೆ; ಸ್ಥಳೀಯರು ಪುಳಕ

ಎಸ್.ಸುರೇಶ್ ನೀರಗುಂದ
Published 9 ನವೆಂಬರ್ 2020, 7:31 IST
Last Updated 9 ನವೆಂಬರ್ 2020, 7:31 IST
ಹೊಸದುರ್ಗ ತಾಲ್ಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಪಶ್ಚಿಮಕ್ಕಿರುವ ಗುಡ್ಡದ ತಪ್ಪಲಿನಲ್ಲಿ ಸೃಷ್ಟಿಯಾದ ಜಲಪಾತದಲ್ಲಿ ಬಾಲಕಿಯರು ಸಂಭ್ರಮಿಸಿದರು
ಹೊಸದುರ್ಗ ತಾಲ್ಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಪಶ್ಚಿಮಕ್ಕಿರುವ ಗುಡ್ಡದ ತಪ್ಪಲಿನಲ್ಲಿ ಸೃಷ್ಟಿಯಾದ ಜಲಪಾತದಲ್ಲಿ ಬಾಲಕಿಯರು ಸಂಭ್ರಮಿಸಿದರು   

ಹೊಸದುರ್ಗ: ಬಯಲು ಸೀಮೆಯ ಬರದ ನಾಡಿನ ತಾಲ್ಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮದ ಪಶ್ಚಿಮಕ್ಕಿರುವ ದೇವರಗುಡ್ಡದ ತಪ್ಪಲಿನಲ್ಲಿ ಜಲಪಾತ ಸೃಷ್ಟಿಯಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಗ್ರಾಮದಿಂದ ಕೇವಲ 3 ಕಿ.ಮೀ ದೂರದಲ್ಲಿ ಗುಡ್ಡವಿದೆ. ಸುಮಾರು 450 ಎಕರೆ ವಿಸ್ತೀರ್ಣ ಇರುವ ಈ ಗುಡ್ಡದ ಮೇಲ್ಭಾಗದಲ್ಲಿ ಮಲ್ಲಯ್ಯನಕೆರೆ, ಯರ್‍ರಪ್ಪನಕೆರೆ, ಶಿವಲಿಂಗಯ್ಯನ ಕೆರೆಗಳಿವೆ. ಈ ಬಾರಿ ಸುರಿದ ಭಾರಿ ಮಳೆಗೆ ಈ ಮೂರೂ ಕೆರೆಗಳು ಭರ್ತಿಯಾಗಿವೆ. ಈ ಭಾಗದಲ್ಲಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಸಾಕಷ್ಟು ಜೋಪುನೀರು ಬೆಟ್ಟದ ಮೇಲಿಂದ ಧುಮ್ಮಿಕ್ಕುತ್ತಿದೆ. ಇದರಿಂದ ಈ ಜಾಗ ನೀರು ಧುಮ್ಮಿಕ್ಕುವ ಸರೋವರವೆಂದೇ ಪ್ರಸಿದ್ಧಿಯಾಗಿದೆ.

15 ದಿನಗಳಿಂದ ಇಲ್ಲಿ ಫಾಲ್ಸ್‌ ನಿರ್ಮಾಣವಾಗಿದೆ. ಇಲ್ಲಿ ಧುಮ್ಮಿಕ್ಕುವ ನೀರು ಹಕ್ಕಿತಿಮ್ಮಯ್ಯನಹಟ್ಟಿ, ಹೊನ್ನೇನಹಳ್ಳಿ ಕೆರೆ ತುಂಬಿಸಿದೆ. ಈ ಎರಡು ಕೆರೆ ಕೋಡಿಬಿದ್ದು ಕಾನಿಹಳ್ಳದ ಮೂಲಕ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ. ಕೊರೊನಾ ಭೀತಿಯಿಂದ ರಾಜ್ಯ, ಹೊರರಾಜ್ಯಗಳಿಗೆ ಪ್ರವಾಸ ಹೋಗುವುದನ್ನು ಹಲವರು ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯವಾಗಿ ಜಲಪಾತ ಸೃಷ್ಟಿಯಾಗಿರುವುದು ಹಲವರಿಗೆ ಖುಷಿ ತಂದಿದೆ. ಇದರಿಂದಾಗಿ ಕುತೂಹಲದಿಂದ ಸುತ್ತಮುತ್ತಲಿನ ಹಲವು ಜನರು ಇಲ್ಲಿಗೆ ಬರುತ್ತಿದ್ದಾರೆ. ಧುಮ್ಮಿಕ್ಕುತ್ತಿರುವ ನೀರಿನಲ್ಲಿ ಮಿಂದು ಶಿಳ್ಯೆ, ಕೇಕೆ ಹಾಕುತ್ತಾ ಪ್ರಕೃತಿಯ ಸೊಬಗನ್ನು ಸವಿಯುತ್ತಿದ್ದಾರೆ.

ADVERTISEMENT

‘ಬಯಲು ಸೀಮೆಯ ಜನ ಜಲಪಾತಗಳನ್ನು ನೋಡಲು ಮಲೆನಾಡು ಪ್ರದೇಶಗಳಿಗೆ ಹೋಗುತ್ತಿದ್ದರು. ಆದರೆ, ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ಉತ್ತಮವಾಗಿ ಮಳೆ ಬರುತ್ತಿದೆ. ಈ ಬಾರಿ ಶೇ 23ರಷ್ಟು ಅಧಿಕ ಮಳೆಯಾಗಿದೆ. ಇದರಿಂದ ಬೆಟ್ಟಗುಡ್ಡಗಳು ಮಲೆನಾಡಿನಂತೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ. ಮಳೆರಾಯನ ಕೃಪೆಯಿಂದ ಪ್ರಕೃತಿಯ ಸೊಬಗು ಸವಿಯುವ ಭಾಗ್ಯ ಬರದ ನಾಡಿನ ಜನರಿಗೆ ಸಿಕ್ಕಿದೆ. ಆದರೆ, ಜಲಪಾತ ಸೃಷ್ಟಿಯಾಗಿರುವ ಜಾಗಕ್ಕೆ ಹೋಗಲು ದಾರಿಯಾಗಲಿ, ರಸ್ತೆಯಾಗಲಿ ಇಲ್ಲದಿರುವುದು ಬೇಸರವನ್ನುಂಟು ಮಾಡಿದೆ’ ಎನ್ನುತ್ತಾರೆ ಡಿ.ಮಲ್ಲೇಶ್‌.

ಸಮೀಪದಲ್ಲಿಯೇ ರಾಜ್ಯದ ಪುರಾಣ ಪ್ರಸಿದ್ಧ ಹಾಲುರಾಮೇಶ್ವರ ಪುಣ್ಯಕ್ಷೇತ್ರವಿದೆ. ಇಲ್ಲಿಗೆ ನಿತ್ಯವೂ ನೂರಾರು ಭಕ್ತರು ಬೇರೆ, ಬೇರೆ ಕಡೆಯಿಂದ ಬರುತ್ತಾರೆ. ಈ ಪಣ್ಯಕ್ಷೇತ್ರದ ಹಿಂಭಾಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಚಾನಲ್‌ ಇದೆ. ಈ ಎರಡು ಸ್ಥಳಕ್ಕೆ ಹೊಂದಿಕೊಂಡಂತೆ ಜಲಪಾತ ಸೃಷ್ಟಿಯಾಗಿದ್ದು, ಡಿಸೆಂಬರ್‌ವರೆಗೂ ಫಾಲ್ಸ್‌ ಇರಲಿದೆ. ಹಾಗಾಗಿ, ಈ ಸ್ಥಳಕ್ಕೆ ಮೂಲಸೌಕರ್ಯ ಕಲ್ಪಿಸಿ ಪ್ರವಾಸಿ ತಾಣವಾಗಿ ರೂಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.