ಹೊಳಲ್ಕೆರೆ: ಚಿರತೆ, ಕರಡಿ, ಹಂದಿ, ಆನೆ ಸೇರಿ ಕಾಡು ಪ್ರಾಣಿಗಳಿಂದ ರೈತರನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ರೈತಸಂಘದ ಸದಸ್ಯರು ಬುಧವಾರ ತಹಶೀಲ್ದಾರ್ ಕೊರಲಗುಂದಿ ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಈಚೆಗೆ ತಾಲ್ಲೂಕಿನ ಗಿಲಿಕೇನಹಳ್ಳಿಯಲ್ಲಿ ಚಿರತೆಯೊಂದು ರೈತ ಮಹಿಳೆಯ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಹಲವು ಕಡೆ ಚಿರತೆಗಳು ಕುರಿ, ಹಸು, ಎತ್ತು, ಎಮ್ಮೆಗಳ ಮೇಲೆ ದಾಳಿ ನಡೆಸಿ ಸಾಯಿಸಿದೆ. ಜೊತೆಗೆ ಹಂದಿಗಳು ಬೆಳೆ ನಾಶ ಮಾಡುತ್ತಿವೆ. ಆದರೆ, ಅರಣ್ಯ ಇಲಾಖೆಯವರು ರೈತರಿಗೆ ಪರಿಹಾರ ನೀಡಿಲ್ಲ. ಪ್ರಾಣಿಗಳನ್ನು ಹಿಡಿಯುವ ಕಾರ್ಯವನ್ನೂ ಮಾಡಿಲ್ಲ ಎಂದು ದೂರಿದರು.
ತಾಲ್ಲೂಕಿನ ತಣಿಗೆಹಳ್ಳಿ, ಹಿರೇಕಂದವಾಡಿ, ಕಾಗಳಗೆರೆ, ಮುತ್ತಗದೂರು, ಸಾಸಲು ಸುತ್ತಲಿನ ಗ್ರಾಮಗಳಲ್ಲಿ ಗಣಿ ಕಂಪನಿಗಳಿಂದ ಬೆಳೆಗಳು ಹಾಳಾಗುತ್ತಿವೆ. ಆದ್ದರಿಂದ ಗಣಿ ಬಾಧಿತ ಪ್ರದೇಶಗಳಿಗೆ ಬಳಸುವ ಡಿಎಂಎಫ್ ಹಣದಲ್ಲಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ವಸಂತ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ, ಮಂಜುನಾಥ, ಉಮಾಪತಿ, ನಾಗರಾಜ, ಹಾಲಪ್ಪ, ರಮೇಶ, ಮದಕರಿ ನಾಯಕ ಸೇನಾ ಸಮಿತಿಯ ಅಧ್ಯಕ್ಷ ರಾಜಣ್ಣ, ಚೇತನ್, ತಿಮ್ಮಣ್ಣ, ಕುಮಾರ, ತಿಪ್ಪೇಸ್ವಾಮಿ, ಚಂದ್ರಪ್ಪ, ಮಂಜನಾಯ್ಕ, ಸುನಿಲ್, ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.