ADVERTISEMENT

ಧರ್ಮಪುರ: ವೇಣುಕಲ್ಲು ಗುಡ್ಡದ ಯತ್ತಪ್ಪನ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:11 IST
Last Updated 28 ನವೆಂಬರ್ 2025, 5:11 IST
ಮಹಿಳೆಯರು ಹಟ್ಟಿ ಬೆಳಗು ಕಾರ್ಯಕ್ರಮಕ್ಕೆ ಹೊಳೆಗೆ ಹೋಗುತ್ತಿರುವುದು 
ಮಹಿಳೆಯರು ಹಟ್ಟಿ ಬೆಳಗು ಕಾರ್ಯಕ್ರಮಕ್ಕೆ ಹೊಳೆಗೆ ಹೋಗುತ್ತಿರುವುದು    

ಧರ್ಮಪುರ: ಕಾಡುಗೊಲ್ಲ ಬುಡಕಟ್ಟು ಸಮುದಾಯ ಚಿತ್ತಮುತ್ತಿ ಕುಲದ ಕರಡಿಗೊಲ್ಲರ ಆರಾಧ್ಯ ದೈವ ಈರಗಾರ ವೇಣುಕಲ್ಲು ಗುಡ್ಡದ ಶ್ರೀ ಯತ್ತಪ್ಪ ಸ್ವಾಮಿಯ ಜಾತ್ರಾ ಮಹೋತ್ಸವ ನ. 28ರಿಂದ ಆರಂಭಗೊಳ್ಳಲಿದೆ.

ನ. 28ರಂದು ಹಟ್ಟಿ ಬೆಳಗು ಪೂಜೆಯ ಬಳಿಕ ಗ್ರಾಮದ ಪೂಜಾರಿಗಳು, ಯಜಮಾನರು, ಗೌಡರು ಹಾಗೂ ಗುಡಿಕಟ್ಟಿನ ಅಣ್ಣತಮ್ಮಂದಿರು ಪಾದಯಾತ್ರೆ ಮೂಲಕ ಪಾವಗಡ ತಾಲ್ಲೂಕಿನ ಪಾಲೇನಹಳ್ಳಿಯ ಚಿತ್ರಲಿಂಗೇಶ್ವರ ಸ್ವಾಮಿಯ ಮೂಲ ಸನ್ನಿಧಾನಕ್ಕೆ ತೆರಳಿ ಪೂಜೆ ಮುಗಿಸಿಕೊಂಡು, ಗ್ರಾಮಕ್ಕೆ ಮರಳಿ ಬಂದಮೇಲೆ ಅಜ್ಜಿಕಟ್ಟೆ ಬಳಿ ಇರುವ ವಾಸೆಕಲ್ಲಿಗೆ ಪೂಜೆ ಸಲ್ಲಿಸಿದ ನಂತರ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗುತ್ತದೆ.

ನ. 29 ಝಾಂಡೇದ ಮರ ಪೂಜೆ, 30ಕ್ಕೆ ಹಾಲು ಮೀಸಲು ಕರೆಯುವುದು, ಡಿ. 1ರಂದು ಬೆಳಿಗ್ಗೆ 6.30ಕ್ಕೆ ಹುತ್ತದ ಪೂಜೆ ಮುಗಿದ ಬಳಿಕ ಶ್ರೀ ಯತ್ತಪ್ಪ ಸ್ವಾಮಿ ಕಟ್ಟೆಗೆ ಹೋಗಿ ಗಂಗಾ ಪೂಜೆ ನೆರವೇರಿಸಲಾಗುವುದು. ಸಂಜೆ ಮೆರವಣಿಗೆ ನಂತರ ಎಡೆ ಹಾಕಲಾಗುವುದು. ಡಿ. 2ರಂದು  ಬೆಳಗ್ಗೆ ಅಣ್ಣತಮ್ಮಂದಿರು ಅಕ್ಕಿ ಅಳೆಯುವರು. ನಂತರ ಅನ್ನ ಸಂತರ್ಪಣೆ, ರಾತ್ರಿ 9 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ.

ADVERTISEMENT

ಡಿ. 3ರಂದು ಬುಧವಾರ ಬೆಳಿಗ್ಗೆ 9.30ಕ್ಕೆ ಶ್ರೀ ವೀರನಾಗಮ್ಮನ ಗುಡ್ಡೆ ಪೂಜೆ ನಡೆಯಲಿದೆ. ಡಿ. 4ರಂದು ಬೆಳಿಗ್ಗೆ 6 ಗಂಟೆಗೆ ದೇವರನ್ನು ಗುಡಿ ತುಂಬಿಸಲಾಗುವುದು. ನಂತರ ಅಣ್ಣತಮ್ಮಂದಿರ ಜಾಡಿಯ ಮೇಲೆ ಖರ್ಚು ವೆಚ್ಚ ಹಾಕಿ, ಎಡೆ ಹಿಡಿಯುವ ಕಾರ್ಯ ನಡೆಯಲಿದೆ. ಡಿ. 6ರಂದು ಶನಿವಾರ ಮರು ದೀಪೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

‘ಕಾಡುಗೊಲ್ಲರಾದ ನಾವು ಈ ಹಬ್ಬವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದೇವೆ. ಕಾಡುಗೊಲ್ಲರ ಬೆಡಗಿನ ಸಂಪ್ರದಾಯದಂತೆ ಜಾತ್ರೆ ಒಂದು ವಾರ ನಡೆಯಲಿದೆ. ಈ ಜಾತ್ರೆಗೆ ಹಿರಿಯೂರು, ಚಳ್ಳಕೆರೆ, ಶಿರಾ, ಪಾವಗಡ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ’ ಎಂದು ಗುಡಿಗೌಡರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.