ADVERTISEMENT

ಕೊರೊನಾ ಕೈಯಾಗ ಸಿಕ್ಕ ನರಳಾಕ್ಕ ಹತ್ತೇವಿರ್ರೀ..: ಹಾಡಿನ ಮೂಲಕ ಜಾಗೃತಿಗೆ ಯತ್ನ

ಬಾಲಶೇಖರ ಬಂದಿ
Published 1 ಮೇ 2020, 19:30 IST
Last Updated 1 ಮೇ 2020, 19:30 IST
ವಕೀಲ ಲಕ್ಷ್ಮಣ ಅಡಿಹುಡಿ
ವಕೀಲ ಲಕ್ಷ್ಮಣ ಅಡಿಹುಡಿ   

ಮೂಡಲಗಿ (ಬೆಳಗಾವಿ): ಕೊರೊನಾ ಸೋಂಕು ಜನರಲ್ಲಿ ಭಯ, ಆತಂಕ ಮೂಡಿಸಿದೆ. ಸೋಂಕು ವಿರುದ್ಧ ಹೋರಾಟಕ್ಕೆ ಇಡೀ ಸಮಾಜ ಇಳಿದಿದೆ. ಇಂತಹ ಸನ್ನಿವೇಶದಲ್ಲಿ ಇಲ್ಲಿನ ಗಾಯಕರೊಂದಿಗೆ ವಕೀಲರು, ಪೊಲೀಸರು, ವೈದ್ಯಕೀಯ ಸಿಬ್ಬಂದಿ ಹಾಡುಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಾ ಗಮನಸೆಳೆದಿದ್ದಾರೆ.

ಕೊರೊನಾ ಹೋರಾಟದ ತಮ್ಮ ಅನುಭವನ್ನು ಹಾಡಿನ ಮೂಲಕ ಹಂಚಿಕೊಂಡಿದ್ದಾರೆ. ಇವರು ಹಾಡಿರುವ ಹಳ್ಳಿ ಸೊಗಡಿನ ಹಾಗೂ ಉತ್ತರ ಕರ್ನಾಟಕದ ಗಟ್ಟಿ ಭಾಷೆಯ ಹಾಡುಗಳು ಕೇಳುಗರನ್ನು ಸೆಳೆಯುತ್ತವೆ. ಇಲ್ಲಿನ ಗಾಯಕ ಶಬ್ಬೀರ ಡಾಂಗೆ ಮತ್ತು ಐಶ್ವರ್ಯ ತಳವಾರ ಸೇರಿ ಹಾಡಿರುವ ‘ಮಹಾಪೂರದಾಗ ಮನಿಮಾರ ಕಳಕೊಂಡು ಕಂಗಾಲ ಆಗೇವರಿ, ಈ ವರ್ಷ ಕೊರೊನಾ ಕೈಯಾಗ ಸಿಕ್ಕ ನರಳಾಕ್ಕ ಹತ್ತೇವಿರ್ರೀ’ ಇದು ವೈರಲ್ ಆಗಿದೆ. ಲಕ್ಷಾಂತರ ಜನರ ಹೃದಯವನ್ನು ತಟ್ಟಿದೆ.

ವಕೀಲ ಲಕ್ಷ್ಮಣ ಅಡಿಹುಡಿ ಹಾಡಿರುವ ‘ಬಡವರ ಒಲಿ ಊರಿಯದ್ಹಂಗ ಮಾಡೈತಿ ಕೊರೊನಾ, ಹಸಿವಿನಿಂದ ಹೋಗಿರಬೇಕು ಅದೆಷ್ಟು ಪ್ರಾಣ’ ಹಾಡು ಬಡವರ ಬದುಕಿನ ಚಿತ್ರಣವನ್ನು ಬಿಂಬಿಸಿದೆ. ಲಕ್ಷ್ಮಣ ಅವರು ಕೊರೊನಾ ಕುರಿತು ಇನ್ನು ಮೂರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

ADVERTISEMENT

ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ ಅನಿಲ ಮಡಿವಾಳ ಅವರು ‘ವೈರಸ್ ತಗುಲಿದರೆ ಔಷಧಿ ನಿಮಗಿಲ್ಲ, ಎಚ್ಚರಿಕೆ ಗೆಳೆಯರೇ ಎಚ್ಚರಿಕೆ’ ಎಂದು ತಾವೇ ಸಾಹಿತ್ಯ ರಚಿಸಿ ಹಾಡಿ ಗಮನಸೆಳೆದಿದ್ದಾರೆ. ಖಾಕಿಯಲ್ಲಿಯೂ ಭಾವನೆಗಳು ಮೀಡಿಯುತ್ತವೆ ಎಂದಿದ್ದಾರೆ. ಇನ್ನು ಆರೋಗ್ಯ ಇಲಾಖೆಯ ಸ್ಟಾಫ್‌ ನರ್ಸ್‌ಗಳು ಕೂಡ ಹಾಡಿಗೆ ಧ್ವನಿಯಾಗಿದ್ದಾರೆ. ‘ಹೊಂಚ ಹಾಕ್ತೈತಿ ಜೀವ ಹಿಂಡತೈತಿ, ಕೊರೊನಾ ಕೊಲ್ಲತೈತಿ, ಹೊರಗಡೆ ಬರಬೇಡ’ ಎಂದು ಹಾಡಿರುವ ನಿಂಗಪ್ಪ ಹೊಸೂರ, ಇರ್ಷಾದ್ ಪೀರಜಾದೆ ಅವರು ಕೊರೊನಾದಿಂದ ರಕ್ಷಿಸಿಕೊಳ್ಳಲು ಪಾಲಿಸಬೇಕಾದ ನಿಯಮಗಳನ್ನು ಸೊಗಸಾಗಿ ನಿರೂಪಿಸಿದ್ದಾರೆ.

ಇಲ್ಲಿ ಕೊರೊನಾ ಕುರಿತು 12ಕ್ಕೂ ಅಧಿಕ ಹಾಡುಗಳು ಸೃಷ್ಟಿಯಾಗಿವೆ. ಅವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಜತೆಗೆ ಜನರಲ್ಲಿ ಧೈರ್ಯ, ಆತ್ಮವಿಸ್ವಾಸ, ಸ್ವಚ್ಛತೆ, ಬದುಕಿನ ಎಲ್ಲ ಮಗ್ಗುಲಗಳನ್ನು ಬಿಂಬಿಸುತ್ತವೆ. ಹೀಗಾಗಿ ಎಲ್ಲರಿಗೂ ಇಷ್ಟವಾಗುವಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.