ADVERTISEMENT

ಕೋವಿಡ್–19: ಮೀನುಗಾರರ ಮೇಲೆ ಗುಂಪು ಹಲ್ಲೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 13:51 IST
Last Updated 6 ಏಪ್ರಿಲ್ 2020, 13:51 IST

ಬಾಗಲಕೋಟೆ: ಕೋವಿಡ್–19 ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್ ಆದೇಶವಿದ್ದರೂ ಹೊರಗೆ ಅಡ್ಡಾಡುತ್ತಿದ್ದಾರೆ ಎಂದು ಆರೋಪಿಸಿ ಮುಧೋಳ ತಾಲ್ಲೂಕು ಬಿದರಿ ಬಳಿ ನಾಲ್ವರು ಮೀನುಗಾರರನ್ನು ಗುಂಪೊಂದು ಥಳಿಸಿದೆ. ಆ ವಿಡಿಯೊ ಈಗ ವೈರಲ್ ಆಗಿದೆ.

ಬಿದರಿ ಸಮೀಪ ಘಟಪ್ರಭಾ ನದಿಗೆ ಭಾನುವಾರ ಬೆಳಿಗ್ಗೆ ಮೀನು ಹಿಡಿಯಲು ಹೋಗಿದ್ದ ಮಹಾಲಿಂಗಪುರದ ಮೀನುಗಾರರಾದ ಹುಸೇನ್‌ಸಾಬ್ ಹಾಗೂ ಪುತ್ರ ಹಾಸಿಂ, ಕಿರಣ್ ಮತ್ತು ರಾಕೇಶ್ ಎಂಬುವವರನ್ನು ಥಳಿಸಲಾಗಿದೆ.

ಬೈಕ್‌ನಲ್ಲಿ ಬಂದ ಮೀನುಗಾರರನ್ನು ಘಟಪ್ರಭಾ ನದಿಯ ಸೇತುವೆ ಬಳಿ ಅಡ್ಡ ಹಾಕುವ ಗುಂಪು, ’ನಿಮ್ಮಿಂದಲೇ ದೇಶದಲ್ಲಿ ರೋಗ ಹರಡುತ್ತಿದೆ. ಮನೆಯೊಳಗೆ ಇರಲು ಹೇಳಿದರೂ ಕೇಳುತ್ತಿಲ್ಲ. ನಮಗೂ ಹಚ್ಚುತ್ತೀರಿ‘ ಎಂದು ನಿಂದಿಸುತ್ತದೆ. ಈ ವೇಳೆ ವ್ಯಕ್ತಿಯೊಬ್ಬ ಅವರನ್ನು ಕೋಲಿನಿಂದ ಹೊಡೆಯುತ್ತಾನೆ. ನಂತರ ಎಲ್ಲರ ಮೊಬೈಲ್ ಸಂಖ್ಯೆಗಳನ್ನು ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ.

ADVERTISEMENT

ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರೊಲ್ಲ:

ಕೋವಿಡ್–19 ನೆಪದಲ್ಲಿ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ, ಸಾಮಾಜಿಕ ಜಾಲ ತಾಣದಲ್ಲಿ ಕೋಮು ದ್ವೇಷದ ಸಂದೇಶಗಳ ಹರಡಿದರೆ ಸುಮ್ಮನಿರೊಲ್ಲ.ಯಾರ ಬಗ್ಗೆಯಾದರೂ ಅನುಮಾನಗಳು ಇದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಎಸ್ಪಿ ಲೋಕೇಶ ಜಗಲಾಸರ್ ಪ್ರಕಟಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.