ಬಂಟ್ವಾಳ: ಬಿ.ಸಿ. ರೋಡ್ನಲ್ಲಿ ಆರ್ಎಸ್ಎಸ್ ಕಾರ್ಯಕರ್ತ, ಲಾಂಡ್ರಿ ಮಾಲೀಕ ಶರತ್ ಮಡಿವಾಳ ಮೇಲಿನ ಹಲ್ಲೆಗೆ ಸಂಬಂಧಿಸಿದ ಆರೋಪಿಗಳ ಪತ್ತೆಗೆ ಆರು ತಂಡ ರಚಿಸಲಾಗಿದ್ದು, ಹಲವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಿ.ಸಿ.ರೋಡ್ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಮೊಕ್ಕಾಂ ಹೂಡಿರುವ ಅವರು ಸುದ್ದಿಗಾರ ರೊಂದಿಗೆ ಮಾತನಾಡಿ, ‘ಪ್ರಕರಣ ಸಂಬಂಧ 20 ಮಂದಿಯನ್ನು ಈಗಾಗಲೇ ವಿಚಾರಣೆ ನಡೆಸಲಾಗಿದ್ದು, ಯಾವುದೇ ರೀತಿಯ ಮಹತ್ವದ ಸುಳಿವು ಲಭ್ಯವಾಗಿಲ್ಲ. ಇದಕ್ಕಾಗಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮೂರು ತಂಡ ರಚಿಸಲಾಗಿದ್ದು, ಜಿಲ್ಲೆಯ ಇತರ ವ್ಯಾಪ್ತಿಯಲ್ಲಿ ಮೂರು ತಂಡ ಕಾರ್ಯಾಚರಣೆ ಆರಂಭಿಸಿವೆ’ ಎಂದರು.
‘ಗಾಯಾಳು ಶರತ್ ಅವರ ಆರೋಗ್ಯ ಸ್ಥಿತಿ ಯಾವುದೇ ರೀತಿಯಲ್ಲಿ ಸುಧಾರಿಸಿಲ್ಲ. ಬಿ.ಸಿ.ರೋಡ್ನ ತಾಲ್ಲೂಕು ಕಚೇರಿ ಎದುರು ಇಲ್ಲಿನ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ನಡೆಯಲಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ’ ಎಂದರು.
‘1000ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ಏರ್ಪಡಿಸಿದ್ದು, ಇವರ ಮೇಲುಸ್ತುವಾರಿಗೆ 100 ಮಂದಿ ಇನ್ಸ್ಪೆಕ್ಟರ್, ಎಸ್ಐ ಮತ್ತು ಎಎಸ್ಐ ಮತ್ತಿತರ ಅಧಿಕಾರಿಗಳನ್ನು ನಿಯೋಜಿಸ ಲಾಗಿದೆ. 10 ಡಿಆರ್, 12 ಮೀಸಲು ಪಡೆ ಕಾರ್ಯಾಚರಣೆ ನಡೆಸುತ್ತಿವೆ’ ಎಂದು ವಿವರಿಸಿದರು. ಹೆಚ್ಚುವರಿ ಎಸ್ಪಿ ಎನ್.ವಿಷ್ಣುವರ್ಧನ್, ಡಿವೈಎಸ್ಪಿ ರವೀಶ್ ಸಿ.ಆರ್. ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.