ADVERTISEMENT

ಉದಾಸೀನ ಬಿಡುವಂತೆ ತಾಕೀತು

ಜಿ.ಪಂ ಅಧ್ಯಕ್ಷರಿಂದ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 10:05 IST
Last Updated 17 ಜುಲೈ 2013, 10:05 IST

ಸುಳ್ಯ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಾದ ಘನತ್ಯಾಜ್ಯ ವಿಲೇವಾರಿ, ಉದ್ಯೋಗ ಖಾತರಿ, ರಾಜೀವ್ ಗಾಂಧಿ ಸೇವಾ ಕೇಂದ್ರ, ಬಸವ ವಸತಿ ಯೋಜನೆ ವಿಷಯದಲ್ಲಿ ಪಿಡಿಒಗಳು ಉದಾಸೀನ ಭಾವನೆ ಬಿಟ್ಟು ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು ಎಂದು  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಕರೆ ನೀಡಿದ್ದಾರೆ.

ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಪಿಡಿಒಗಳಿಗೆ ಎಚ್ಚರಿಕೆ ನೀಡಿದರು. ಜಿಲ್ಲೆಗೆ ನೈಮಲ್ಯ ಪರಸ್ಕಾರ ಸಿಕ್ಕಿದ್ದರೂ ಘನತ್ಯಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯಿತಿಗಳು ಇನ್ನೂ ಸ್ಥಳವನ್ನು ಗುರುತಿಸದೇ ಇರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ ಪೈಕಿ ಸಂಪಾಜೆ ಹಾಗೂ ಕಲ್ಮಡ್ಕ ಗ್ರಾಮಗಳಲ್ಲಿ ಮಾತ್ರ ಸ್ಥಳ ಗುರುತಿಸಲಾಗಿದೆ. ಜಾಲ್ಸೂರಿನಲ್ಲಿ ಕಾಯ್ದಿರಿಸಿದ ಜಮೀನಿನ ಬಗ್ಗೆ ಆಕ್ಷೇಪಗಳು ಬಂದಿವೆ. ಕಡತ ಎಸಿ ಕಚೇರಿಯಲ್ಲೇ ಬಾಕಿ ಉಳಿದಿದೆ ಎಂದು ಅಲ್ಲಿನ ಪಿಡಿಒ ಹೇಳಿದರು.

ಆದರೆ ಎಸಿ ಅವರನ್ನು ಫೋನ್ ಮೂಲಕ ಸಂಪರ್ಕಿಸಿದ ಕೊರಗಪ್ಪ ನಾಯ್ಕರು, ಅಲ್ಲಿ ಯಾವುದೇ ಆಕ್ಷೇಪಣೆಗಳು ದಾಖಲಾಗದೇ ಇರುವುದನ್ನು ಖಚಿತಪಡಿಸಿಕೊಂಡು ಪಿಡಿಒ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಪಂಜದಲ್ಲಿ ತ್ಯಾಜ್ಯ ಹಾಕಲು ಸ್ಮಶಾನ ಭೂಮಿಯ ಬದಲಿಗೆ ಬೇರೆ ಜಮೀನು ಗುರುತಿಸಲು ಕಂದಾಯ ಇಲಾಖೆಗೆ  ತಿಳಿಸಲು ಸೂಚಿಸಲಾಯಿತು.

ಪಿಡಿಒಗಳು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಕಚೇರಿ ಪುಸ್ತಕದಲ್ಲಿ ಕಡ್ಡಾಯವಾಗಿ ದಾಖಲು ಮಾಡಬೇಕು. ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ  ಎಂದು ಕೊರಗಪ್ಪ ನಾಯ್ಕ ಹೇಳಿದರು.

ಜಿ.ಪಂ. ಉಪಾಧ್ಯಕ್ಷ ರೀತೇಶ್ ಶೆಟ್ಟಿ, ನೂತನ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ತುಳಸಿ ಮದ್ದಿನೇನಿ, ಉಪ ಕಾರ‌್ಯದರ್ಶಿ ಶಶಿಧರ್, ಜಿ.ಪಂ ಸದಸ್ಯರಾದ ಆಶಾ ತಿಮ್ಮಪ್ಪ, ನವೀನ್‌ಕುಮಾರ್ ಮೇನಾಲ, ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಉಪಾಧ್ಯಕ್ಷ ಹರೀಶ್ ರೈ, ಜಿಲ್ಲಾ ನೆರವು ಘಟಕದ ಸಂಯೋಜಕಿ ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT