ADVERTISEMENT

ಉಪ ನೋಂದಣಾಧಿಕಾರಿ ಕಚೇರಿ ಇಕ್ಕಟ್ಟು; ಜನರಿಗೆ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 8:10 IST
Last Updated 3 ಮಾರ್ಚ್ 2012, 8:10 IST

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ನಗರ ಪೊಲೀಸ್ ಠಾಣೆ ಬಳಿ ಇರುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಿನವಿಡೀ ಜನಜಂಗುಳಿ ಇದೆ. ಆದರೆ ಇದಕ್ಕೆ ತಕ್ಕಂತೆ ಇಲ್ಲಿ ಜನಸಾಮಾನ್ಯರ ಕೆಲಸ ಮಾತ್ರ ಅಷ್ಟೇ ~ತ್ವರಿತ ಮತ್ತು ಪ್ರಾಮಾಣಿಕ~ವಾಗಿ ನಡೆಯುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ.

ಮಾಜಿ ಲೋಕಾಯುಕ್ತ ನ್ಯಾ.ವೆಂಕಟಾಚಲ ಅವರು ದಾಳಿಗೆ ಒಳಗಾದ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ~ತಲೆಕೆಳಗಾಗಿ ಧ್ವಜಾರೋಹಣ~ ಮಾಡುವ ಮೂಲಕ ಭಾರೀ ಸುದ್ದಿಯಲ್ಲಿದ್ದ ಪನೋಂದಣಾಧಿಕಾರಿ ಕಚೇರಿ ಇದೀಗ ಮತ್ತೆ ಸುದ್ದಿಯಲ್ಲಿದೆ.

ಮೊದಲೇ ಕಿರಿದಾಗಿರುವ ಕಚೇರಿಯಲ್ಲಿ  ಅರ್ಜಿದಾರರಿಗೆ ಕೂರಲು ಸೂಕ್ತ ಸ್ಥಳಾವಕಾಶ ಮತ್ತು ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ ಇಲ್ಲ. ಇಲ್ಲಿ ಏನಿದ್ದರೂ ಮಧ್ಯವರ್ತಿಗಳು ಮತ್ತು ದಸ್ತಾವೇಜು ಬರಹಗಾರರ ವಹಿವಾಟು ಮಾತ್ರ ನಡೆಯುತ್ತಿದೆ.
 
ಬಡಪಾಯಿ ವ್ಯಕ್ತಿಯೊಬ್ಬ ಚಿನ್ನಾಭರಣ ಅಡವಿಟ್ಟು ಖರೀದಿಸಿದ ಜಮೀನು ನೋಂದಣಿಗೆ ಕೂಡಾ ಕನಿಷ್ಠ ಒಂದೂವರೆ ಸಾವಿರ ಲಂಚ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇಲ್ಲಿ ಕುಳಿತಕೊಳ್ಳಲು ಸರಿಯಾದ ಸ್ಥಳಾವಕಾಶ ಮತ್ತು ಶೌಚಾಲಯ ವ್ಯವಸ್ಥೆಯೂ ಇಲ್ಲ.

ಸರ್ಕಾರದ ~ಭೂಮಿ~ ಮತ್ತು ~ಕಾವೇರಿ~ ಎಂಬ ಹೊಸ ತಂತ್ರಾಂಶ ಅಳವಡಿಕೆಯಿಂದಾಗಿ ಮೋಜಣಿಗೆ ಸಂಬಂಧಿಸಿದ 11ಇ ನಕ್ಷೆ ಮತ್ತು ಪ್ಲಾಟಿಂಗ್ ನಕ್ಷೆ ಪಡೆಯಲು ಅಸಾಧ್ಯವಾಗಿದೆ. ಮಾತ್ರವಲ್ಲದೆ ಆಶ್ರಯ ಯೋಜನೆ ಮತ್ತಿತರರಿಂದ ಅಡಮಾನ ಸಾಲ, ಅಡಮಾನ ಮುಕ್ತ ಪ್ರಮಾಣಪತ್ರ ಪಡೆಯಲು ಕೂಡಾ ಆಗುತ್ತಿಲ್ಲ.
 
ಮೊದಲೇ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಈ ಕಚೇರಿಗೆ ಇತ್ತೀಚೆಗಷ್ಟೇ ಸುತ್ತಲೂ ಆವರಣಗೋಡೆ ಮತ್ತು ಜನರೇಟರ್ ಅಳವಡಿಸಲಾಗಿದ್ದು, ಇಲ್ಲಿನ ದಸ್ತಾವೇಜು ಬರಹಗಾರರು ಮತ್ತು ಕೆಲವೊಂದು ವಕೀಲರು ಸೇರಿ ಉಚಿತ ಕಂಪ್ಯೂಟರ್ ಒದಗಿಸಿರುವುದಾಗಿ ತಿಳಿಸಿದ್ದಾರೆ.

ಇಲ್ಲಿನ ಕಂದಾಯ ಇಲಾಖೆ ಮತ್ತು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪದೇ ಪದೇ ಉಂಟಾಗುವ ಕಡತ ನಾಪತ್ತೆ ಪ್ರಕರಣ, ಮೂಲಭೂತ ಸೌಕರ್ಯ ಕೊರತೆ, ಲಂಚಾವತಾರ, ಭೂಮಾಪಕರ ಕೊರತೆ ಹಾಗೂ ಭೂಮಾಪನಾ ಕಚೇರಿಯಲ್ಲಿ ಉಂಟಾಗುತ್ತಿರುವ ವಿಳಂಬಕ್ಕೆ ಸಂಬಂಧಿಸಿದಂತೆ ಇಲ್ಲಿನ ವಕೀಲರ ಸಂಘದ ಮಾಜಿ ಅಧ್ಯಕ್ಷ ಅಶ್ವನಿ ಕುಮಾರ್ ರೈ ನೇತೃತ್ವದ ನಿಯೋಗವು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಸರ್ವೇ ಇಲಾಖೆ ಆಯುಕ್ತ ವಿ.ಪೊನ್ನುರಾಜ್ ಜತೆ ಮಾತುಕತೆ ನಡೆಸಿದ್ದಾರೆ.

ತಾಲ್ಲೂಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ “ಭೂಮಸೂದೆ ಕಾಯ್ದೆಯಡಿ ದೊರೆತ ಜಮೀನು~ ಇರುವ ಹಿನ್ನೆಲೆಯಲ್ಲಿ ನಕ್ಷೆ ತಯಾರಿಗೆ ಸಂಬಂಧಿಸಿದಂತೆ ಗರಿಷ್ಠ ಅರ್ಜಿ ವಿಲೇವಾರಿಗೆ ಬಾಕಿ ಉಳಿದಿರುವ ಬಗ್ಗೆಯೂ ಮಾತುಕತೆ ವೇಳೆ ವಿವರಿಸಿದ್ದು, ಗುತ್ತಿಗೆ ಆಧಾರಿತ ಭೂಮಾಪಕರ ನೇಮಕಾತಿ ಹಾಗೂ ಕಡತ ವಿಲೇವಾರಿಗೆ ತ್ವರಿತ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ ಎಂದಿದ್ದಾರೆ.

ನಿಯೋಗದಲ್ಲಿ ರಾಮಚಂದ್ರ ಶೆಟ್ಟಿ, ಸುರೇಶ ಶೆಟ್ಟಿ, ಅರುಣ್ ರೋಶನ್ ಡಿಸೋಜ, ಪ್ರಮುಖರಾದ ಉಮ್ಮರ್ ಮಂಚಿ, ಕೆ.ಎಚ್.ಅಬೂಬಕ್ಕರ್, ಅಜೀಜ್ ಮತ್ತಿತರರಿದ್ದು, ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಆಶಾದಾಯಕ ಭರವಸೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.