ADVERTISEMENT

ಕಂಕಣ ಭಾಗ್ಯಕ್ಕೆ ಜೋಡಿಯ ಅಲೆದಾಟ...!

ಪ್ರೀತಿಯ ವಿವಾಹಕ್ಕೆ ಜಾತಿ ಅಡ್ಡಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 10:31 IST
Last Updated 18 ಮಾರ್ಚ್ 2014, 10:31 IST

ಪುತ್ತೂರು: ಪರಸ್ಪರ ಪ್ರೀತಿಸುತ್ತಿದ್ದ ವಿಭಿನ್ನ ಜಾತಿಗೆ ಸೇರಿದ ಯುವ ಜೋಡಿಯೊಂದು ವಿವಾಹಕ್ಕೆ ಹೆತ್ತವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ  ಪುತ್ತೂರು ನಗರ ಠಾಣೆಗೆ ಬಂದು ವಿವಾಹ ನೆರವೇರಿಸಿ ಕೊಡಬೇಕೆಂದು ಕೇಳಿಕೊಂಡಿ­ದ್ದಾರೆ. ಠಾಣೆಯಲ್ಲಿ ವಿವಾಹ ಮಾಡಿಕೊಡಲು ಅವಕಾಶ­ವಿಲ್ಲದ ಕಾರಣ ಪೊಲೀಸರು ನಿರಾಕರಿಸಿದ್ದಾರೆ.

ಮುಂಡೂರು ಗ್ರಾಮದ, ಬಡಕೋಡಿ ಸಮೀಪದ ನಡುಬೈಲು ನಿವಾಸಿ ಮಾಧವ ಮಡಿವಾಳ ಅವರ ಪುತ್ರ ಹರೀಶ್ (25) ಮತ್ತು ಮಂಗಳೂರಿನ ಕುಡುಪು ನಿವಾಸಿ ರತ್ನಾಕರ ದೇವಾಡಿಗರ ಪುತ್ರಿ ಅಶ್ವಿತಾ (24), ಠಾಣೆಗೆ ಬಂದು ವಿವಾಹ ನೆರವೇರಿಸಿ ಕೊಡುವಂತೆ ಕೇಳಿಕೊಂಡರು.

ಸುದ್ದಿಗಾರೊಂದಿಗೆ ಮಾತನಾಡಿದ ಹರೀಶ್, ನಾವಿಬ್ಬರು ಮೂರು ವರ್ಷಗಳಿಂದ ಪ್ರೀತಿಸಿ ವಿವಾಹವಾಗಲು ನಿರ್ಧರಿಸಿದ್ದೇವೆ. ಎರಡೂ ಕಡೆಯಿಂದ ಹೆತ್ತವರ ವಿರೋಧ ವ್ಯಕ್ತವಾಗಿದೆ. ವಿವಾಹ ನಡೆಸಿಕೊಡುವಂತೆ ವಿನಂತಿಸಲು ಠಾಣೆಗೆ ಬಂದಿದ್ದೇವೆ ಎಂದರು. ಕೂಲಿ ಕೆಲಸ ಮಾಡಿಯಾದರೂ ಆಕೆಯನ್ನು ಸಾಕುತ್ತೇನೆ ಎಂದು  ಹೇಳಿದರು.

ಮಡಿವಾಳ ಜಾತಿಗೆ ಸೇರಿದ ಹರೀಶ್ ಮತ್ತು ದೇವಾಡಿಗ ಜಾತಿಗೆ ಸೇರಿದ ಅಶ್ವಿತಾ ವಿವಾಹಕ್ಕೆ ಜಾತಿ ಅಡ್ಡಿಯಾಗಿದೆ. ಪುತ್ತೂರಿನಲ್ಲಿರುವ ಸಂಬಂಧಿಕ­ರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿರುವ ಈ ಜೋಡಿ ಮಂಗಳವಾರ ಮಂಗಳೂರಿಗೆ ತೆರಳಿ ನೋಂದಣಿ ಮೂಲಕ ವಿವಾಹವಾಗಲು ಬಯಸಿರುವುದಾಗಿ ತಿಳಿದು ಬಂದಿದೆ.

ಭೂತ ಕೋಲದಲ್ಲಿ ವಾದ್ಯಗಾರನಾಗಿರುವ ಹರೀಶ್‌ಗೆ  ಭೂತದ ಕೋಲವೊಂದರಲ್ಲಿ ಅಶ್ವಿತಾ ಪರಿಚಯವಾಗಿತ್ತು.  ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮಂಗಳೂರಿನ ಔಷಧಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿತಾರ ಸಂಬಂಧಿಕರ ಮನೆ ಪುತ್ತೂರು ವ್ಯಾಪ್ತಿಯಲ್ಲೇ ಇರುವುದರಿಂದ ಅವರಿಬ್ಬರು ಭೇಟಿ ನಿರಂತರವಾಗಿ ನಡೆಯುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.