ಮೂಲ್ಕಿ: ಇಲ್ಲಿನ ವಿಜಯಾ ಕಾಲೇಜಿನ ವಿದ್ಯಾರ್ಥಿಗಳ ಎರಡು ಗುಂಪುಗಳು ಕ್ಷುಲ್ಲಕ ವಿಷಯಕ್ಕೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಕೆಲವು ದಿನಗಳ ಹಿಂದೆ ಮಣಿಪಾಲ ವೈದ್ಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಕಾಲೇಜಿನ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾಗ ಧ್ವಜ ಹಿಡಿಯುವ ವಿಷಯದಲ್ಲಿ ಎರಡು ಸಂಘಟನೆಗಳ ನಡುವೆ ಮಾತಿನ ಘರ್ಷಣೆ ನಡೆದಿತ್ತು ಎನ್ನಲಾಗಿದ್ದು ಇದೇ ಈ ಮಾರಾಮಾರಿಗೆ ಮೂಲ ಕಾರಣವಾಗಿದೆ.
ಬೆಳಿಗ್ಗೆ ಮೂವರು ವಿದ್ಯಾರ್ಥಿಗಳಿಗೆ ಕಾಲೇಜಿನ ವಿದ್ಯಾರ್ಥಿಗಳ ಸಮೂಹವೊಂದು ಸೇರಿಕೊಂಡು ಕಾಲೇಜಿನ ಮೈದಾನದಲ್ಲಿ ಇದೇ ವಿಚಾರವಾಗಿ ಹಲ್ಲೆ ನಡೆಸಿತ್ತು. ಹಲ್ಲೆಗೊಳಗಾದ ಅಬ್ದುಲ್ ರಾಝಿಕ್, ಅಬ್ದುಲ್ ರಿಫಾನ್, ಸಫಾನ್ ಅವರು ಮೂಲ್ಕಿಯ ಕಾರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶರತ್, ರಕ್ಷಿತ್, ಸಚಿನ್, ಶಿವರಾಜ್, ವಿಶಾಲ್ ಮತ್ತು ಶ್ರೇಯಸ್ ಹಲ್ಲೆ ನಡೆಸಿದ್ದಾಗಿ ಈ ದೂರಿನಲ್ಲಿ ತಿಳಿಸಲಾಗಿದೆ.
ಈ ನಡುವೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿರುವ ಶರತ್, ವಿಶಾಲ್ ಮತ್ತು ಶ್ರೇಯಸ್ ಅವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ವಿದ್ಯಾರ್ಥಿಗಳು ಅಬ್ದುಲ್ ರಾಝಿಕ್, ಸಫಾನ್ ವಿರುದ್ಧ ದೂರು ಕೊಟ್ಟಿದ್ದಾರೆ. ಸದ್ದಾಂ, ತೌಫಿಲ್, ಎಂ.ಕೆ. ಹುಸೇನ್ ಎಂಬ ಹೊರಗಿನವರು ಈ ಹಲ್ಲೆ ನಡೆಸಿದ ತಂಡದಲ್ಲಿ ಇದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.
ಮೂಲ್ಕಿ ಪೊಲೀಸರು ದೂರು ಮತ್ತು ಪ್ರತಿದೂರನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬಂದ್ಗೆ ಕರೆ: ಆಲ್ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಎಸ್ಎಫ್ಐ) ಘಟನೆಯನ್ನು ಖಂಡಿಸಿದ್ದು, ನಾಳೆ (ಗುರುವಾರ) ವಿಜಯಾ ಕಾಲೇಜ್ ಬಂದ್ಗೆ ಕರೆ ನೀಡಿದೆ.
ಕ್ಯಾಂಪಸ್ ಫ್ರಂಟ್ ಖಂಡನೆ
ಮಂಗಳೂರು: ಮೂಲ್ಕಿ ವಿಜಯಾ ಕಾಲೇಜಿನ ವಿದ್ಯಾರ್ಥಿಗಳಾದ ರಾಝಿಕ್, ರಿಫಾನ್ ಮತ್ತು ಸಫಾನ್ ಎಂಬವರ ಮೇಲೆ ಎಬಿವಿಪಿಯ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಸನಾವುಲ್ಲ ಅವರು ಘಟನೆಯನ್ನು ಖಂಡಿಸಿದ್ದಾರೆ.
ಮಣಿಪಾಲ ವಿದ್ಯಾರ್ಥಿನಿ ಅತ್ಯಾಚಾರದ ವಿರುದ್ಧ ಪ್ರತಿಭಟನೆಗೆ ಹೋಗಲಿಲ್ಲ ಎಂಬ ಕಾರಣ ನೀಡಿ ಹಲವು ದಿನಗಳಿಂದ ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿತ್ತು. ಕಾಲೇಜಿಗೆ ಬಾರದ ಹಾಗೆ ಮಾಡುತ್ತೇವೆ ಎಂದು ಹೇಳಿ ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇಂತಹ ಪ್ರಕರಣಗಳ ಬಗ್ಗೆ ಪ್ರಾಂಶುಪಾಲರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.