ADVERTISEMENT

ಕೋಡಿಂಬಾಡಿಯಲ್ಲಿ ಯುವಮೋರ್ಚಾದಿಂದ ರಸ್ತೆತಡೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 8:59 IST
Last Updated 13 ಡಿಸೆಂಬರ್ 2013, 8:59 IST

ಪುತ್ತೂರು: ಪುತ್ತೂರು- ಉಪ್ಪಿನಂಗಡಿ ರಸ್ತೆಯ ದುರಸ್ತಿ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸಬೇಕು ಎಂದು ಆಗ್ರಹಿಸಿ ಕ್ಷೇತ್ರ ಬಿಜೆಪಿ ಯುವಮೋರ್ಚಾ ಮತ್ತು ಕೋಡಿಂಬಾಡಿ ಯುವಮೋರ್ಚಾ ಗ್ರಾಮ ಸಮಿತಿಯ ನೇತೃತ್ವದಲ್ಲಿ ಗುರುವಾರ ಕೋಡಿಂಬಾಡಿ ಯಲ್ಲಿ `ರಸ್ತೆ ತಡೆ- ಪ್ರತಿಭಟನೆ’ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾಯನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಅವರು ಕೆಟ್ಟು ಹೋಗಿರುವ ಪುತ್ತೂರು -ಉಪ್ಪಿನಂಗಡಿ ರಸ್ತೆಯನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕಾದ ಶಾಸಕರು ಈ ಬಗ್ಗೆ ನಿರ್ಲಕ್ಷಿಸುತ್ತಿದ್ದಾರೆ. ರಸ್ತೆಯಲ್ಲಿ ಸಂಚರಿಸಲು ಜನರು ಪರದಾಡುತ್ತಿದ್ದರೂ ಶಾಸಕರು ಮೌನವಹಿಸುವ ಮೂಲಕ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವ ಗೌಡ ಬಜತ್ತೂರು, ಕ್ಷೇತ್ರ ಬಿಜೆಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಾಜ ರಾಧಾಕೃಷ್ಣ ಆಳ್ವ ಮತ್ತು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿದರು. ಪುತ್ತೂರು- ಉಪ್ಪಿನಂಗಡಿಯ ರಸ್ತೆಯ ಕಾಮಗಾರಿ­ಯನ್ನು ಕೂಡಲೇ ನಡೆಸದೆ ವಿಳಂಬ ಮಾಡಿದರೆ ಹಳ್ಳಿ ಹಳ್ಳಿಯಲ್ಲಿ ಬೀದಿಗಿಳಿದು ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಎಚ್ಚರಿಸಿದರು.

ಕ್ಷೇತ್ರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಿವರಂಜನ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಜಯಾನಂದ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ ರಾವ್ ಬಪ್ಪಳಿಗೆ, ತಾಲೂಕು ಪಂಚಾಯಿತಿ ಸದಸ್ಯ ಉಮೇಶ್ ನಾಯಕ್,  ಪಕ್ಷದ ಮುಖಂಡರಾದ ಪುರುಷೋತ್ತಮ ಮುಂಗ್ಲಿಮನೆ,  ಕೆ. ದೇವಾನಂದ, ರೇವತಿ ವೀರಪ್ಪ,  ಬಾಬು ಗೌಡ, ರಾಮಣ್ಣ ಗೌಡ  ಪ್ರತಿಭಟನೆಯಲ್ಲಿ ಭಾಗವಹಿ ಸಿದ್ದರು. 

ಪ್ರದೀಪ್ ಶೆಟ್ಟಿ ಪನಿಪಾಲು ಮನವಿ ಓದಿದರು. ಮೋಹನ ಪಕ್ಕಳ ಕುಂಡಾಪು ಸ್ವಾಗತಿಸಿ, ಮಾಧವ ಗೌಡ ವಂದಿಸಿದರು. ಮನೋಹರ ಗೌಡ ಡಿ. ವಿ. ಕಾರ್ಯಕ್ರಮ ನಿರೂಪಿಸಿದರು.

ಮನವಿ ಸ್ವೀಕರಿಸಿದ ಡಿ.ವಿ:
ಪ್ರತಿಭಟನೆ ಮುಗಿಯುತ್ತಿದ್ದ ವೇಳೆ ಕೋಡಿಂಬಾಡಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಅವರು ಮನವಿ ಸ್ವೀಕರಿಸಿದರು. ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ  ಎಂಜಿನಿಯರ್ ಪ್ರಮೋದ್ ಕುಮಾರ್ ಜತೆ ಮಾತನಾಡಿ ಕಾಮಗಾರಿಯನ್ನು ತ್ವರಿತವಾಗಿ ನಡೆಸುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.