ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-11 ಜಿಲ್ಲೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 10:20 IST
Last Updated 17 ಜೂನ್ 2011, 10:20 IST

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದ 11 ಜಿಲ್ಲೆಗಳಿಗೆ ವಿಸ್ತರಣೆಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ರೂ. 55.47 ಲಕ್ಷ ಅನುದಾನ ವಿತರಿಸಲಾಗಿದೆ ಎಂದು ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಯಶಸ್ವಿ 29 ವರ್ಷಗಳನ್ನು ಪೂರೈಸಿದ್ದು ಆರ್ಥಿಕವಾಗಿ ದುರ್ಬಲರನ್ನು ಗುರುತಿಸಿ ಜಿಲ್ಲೆಯ 341 ಕುಟುಂಬಗಳಿಗೆ ರೂ.16.324 ಲಕ್ಷ ವಿತರಿಸಲಾಗಿದೆ. ಕೃಷಿ ಅಭಿವೃದ್ಧಿ ಉದ್ದೇಶದಿಂದ 2,991 ಎಕರೆ ಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ಸಾವಯವ ಕೃಷಿ, ಹೊಸ ಕೃಷಿ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ರೈತರ 50 ಅಧ್ಯಯನ ಪ್ರವಾಸ ಕೈಕೊಳ್ಳಲಾಗಿದ್ದು 2651ಕ್ಕೂ ಅಧಿಕ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

ಜಿಲ್ಲೆಯ 1045 ಕುಟುಂಬಗಳಲ್ಲಿ ಶ್ರೀಪದ್ಧತಿ ಬೇಸಾಯ ಮಾಡಿಸಲಾಗಿದೆ. ಇದಕ್ಕೆ ಪೂರಕವಾಗಿ ಯಂತ್ರೋಪಕರಣ ಬಳಕೆ, ಕೃಷಿ ನಿರ್ವಹಣೆ ಸೂಕ್ತ ಮಾಹಿತಿ ಜತೆ 55.99 ಲಕ್ಷ ಪ್ರಗತಿನಿಧಿ ವಿತರಿಸಲಾಗಿದೆ.

ಮೂಲ ಸೌಕರ್ಯ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 178 ಕುಡಿಯುವ ನೀರಿನ ಘಟಕ, 31 ಗ್ರಾಮೀಣ ರಸ್ತೆ, 13 ಭಜನ ಮಂದಿರ, 11 ಹಾಲು ಉತ್ಪಾದಕರ ಸಹಕಾರಿ ಸಂಘ ಕಟ್ಟಡ, 4 ಹಿಂದೂ ರುದ್ರ ಭೂಮಿ ರಚನೆಯಾಗಿದೆ. ಕಿರು ಆರ್ಥಿಕ ವ್ಯವಹಾರದಲ್ಲಿ 18,294 ಪ್ರಗತಿಬಂಧು/ಸ್ವಸಹಾಯ ಸಂಘಗಳಿದ್ದು 5, 840 ಲಕ್ಷ  ಉಳಿತಾಯ ಸಂಗ್ರಹಿಸಲಾಗಿದೆ ಎಂದರು.

ಇದಲ್ಲದೆ 92 ಜಾನುವಾರುಗಳಿಗೆ ವಿಮೆ, ಕಾಲನಿ ಅಭಿವೃದ್ಧಿಗೆ 2.52 ಲಕ್ಷ ವಿತರಿಸಲಾಗಿದೆ. 23 ಮದ್ಯವರ್ಜನ ಶಿಬಿರಗಳಲ್ಲಿ 1316 ಮಂದಿ ಮದ್ಯಮುಕ್ತರಾಗಿದ್ದಾರೆ. 2011-12ರ ಯೋಜನೆಯಡಿ 2142 ಗುಂಪುಗಳನ್ನು ರಚಿಸಿ 20,206 ಸದಸ್ಯರನ್ನು ಸೇರ್ಪಡೆಗೊಳಿಸಲಾಗುವುದು.

ಕಿರು ಆರ್ಥಿಕ ವ್ಯವಹಾರದಡಿ ರೂ.145ಕೋಟಿ ಪ್ರಗತಿನಿಧಿ ವಿತರಿಸಲು ಹಾಗೂ 631.97 ಲಕ್ಷ ಅನುದಾನವನ್ನು ಇತರ ಅಭಿವೃದ್ಧಿಗಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು. ಮಂಗಳೂರು ತಾಲ್ಲೂಕು ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಸಂಪತ್ ಕುಮಾರ್, ಯೋಜನಾಧಿಕಾರಿ ಟಿ.ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.