ADVERTISEMENT

ಪುಷ್ಪಗಿರಿ ಯೋಜನೆ ಕೈಬಿಡಲು ನಿರ್ಧಾರ: ಸಿಎಂ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:45 IST
Last Updated 14 ಅಕ್ಟೋಬರ್ 2011, 8:45 IST

ಪುತ್ತೂರು: `ನನ್ನ ಹುಟ್ಟೂರು ಹಾಗೂ ಸ್ವಕ್ಷೇತ್ರವನ್ನು ಒಳಗೊಂಡ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಲಾಗುವುದು. ಜತೆಗೆ ಕೊಡಗು ಜಿಲ್ಲೆ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಘೋಷಿಸಿದರು.

ಪುತ್ತೂರಿನಲ್ಲಿರುವ ಸ್ವಗೃಹ `ಕಮಲ~ದಲ್ಲಿ ಬುಧವಾರ ಬೆಳಿಗ್ಗೆ ಸುದ್ದಿಗಾರಿಗೆ ಚಹಾಕೂಟ ಏರ್ಪಡಿಸಿದ ನಂತರ  ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

  ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಜಿಲ್ಲೆಯ ಶಾಸಕರೊಂದಿಗೆ ಇದೇ 17ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಲೋಚನೆ ನಡೆಸಿ ಪ್ಯಾಕೇಜ್ ಸ್ವರೂಪ ನಿರ್ಧರಿಸಲಾಗುವುದು. ಪ್ಯಾಕೇಜ್ ಅಭಿವೃದ್ದಿ ಯೋಜನೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಪುಷ್ಪಗಿರಿ ವನ್ಯಧಾಮ ಯೋಜನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದರು.ಪುತ್ತೂರು ಉಪವಿಭಾಗದ ವಾರ್ತಾ ಇಲಾಖೆಗೆ ವಾರ್ತಾಧಿಕಾರಿ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.

`ಉಳಿದವರಂತೆ ನಾನು ಭರವಸೆ ನೀಡುವುದಿಲ್ಲ. ಸತ್ಯ ಹೇಳುತ್ತೇನೆ. ಹೇಳಿದ್ದನ್ನು ಮಾಡಿ ತೋರಿಸುತ್ತೇನೆ. ನನ್ನ ವೈಯಕ್ತಿಕ ಜೀವನದಲ್ಲಿ ಬಹಳಷ್ಟು ಏರುಪೇರುಗಳನ್ನು ಕಂಡಿದ್ದೇನೆ. ರಾಜಕೀಯದಲ್ಲೂ ಕಂಡಿದ್ದೇನೆ. ಈಗ ಸಿಕ್ಕಿರುವ ಅವಕಾಶವನ್ನು ಸವಾಲಾಗಿ ಸ್ವೀಕರಿಸುವ ಮೂಲಕ ರಾಜ್ಯದ ಅಭಿವೃದ್ಧಿ ಮತ್ತು ವರ್ಚಸ್ಸನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ~ ಎಂದು ಅವರು ತಿಳಿಸಿದರು.

ಸಂಸದ ನಳಿನ್, ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ಸುದ್ದಿಗೋಷ್ಠಿಯಲ್ಲಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.