ಬಜ್ಪೆ: ಎತ್ತಿನಹೊಳೆ- ನೇತ್ರಾವತಿ ಯೋಜನೆಯನ್ನು ವಿರೋಧಿಸಿ ಹಲವಾರು ಸಂಘಟನೆಗಳು ನೀಡಿದ್ದ ಜಿಲ್ಲಾ ಬಂದ್ಗೆ ಬಜ್ಪೆ ವ್ಯಾಪ್ತಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಸೋಮವಾರ ಬೆಳಗ್ಗಿನಿಂದ ಬಸ್ ಸಹಿತ ಹಲವಾರು ವಾಹನಗಳು ರಸ್ತೆಗಿಳಿಯಲಿಲ್ಲ. ರಸ್ತೆ ಸಂಚಾರ ಸಂಪೂರ್ಣ ಸ್ತಬ್ದಗೊಂಡಿತ್ತು. ಮುಖ್ಯವಾಗಿ ಆಟೋರಿಕ್ಷಾ ಚಾಲಕ-ಮಾಲಕರು, ಗೂಡ್ಸ್ ಟೆಂಪೋ ಚಾಲಕ- ಮಾಲೀಕರು ಬಂದ್ ಬೆಂಬಲಿಸಿದ್ದರು. ವರ್ತಕರು, ಅಂಗಡಿ ಮಾಲೀಕರು, ಹೋಟೆಲ್, ಗೂಡಂಗಡಿಗಳು ಮಳಿಗೆಗೆ ಬೀಗ ಹಾಕಿದ್ದರಿಂದ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ.
ಬಜ್ಪೆ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ನಡೆಯಲಿಲ್ಲ ಎಂದು ಬಜ್ಪೆ ಪೊಲೀಸ್ ಮೂಲಗಳು ತಿಳಿಸಿವೆ. ವರ್ತಕರ ಸಂಘಟನೆ, ಆಟೋ ರಿಕ್ಷ ಚಾಲಕ ಮಾಲಕರ ಸಂಘ, ಹೋಟೆಲ್ ಮಾಲಿಕರ ಸಂಘ, ವ್ಯಾಪಾರಸ್ಥರು ಬಂದ್ ಬೆಂಬಲಿಸಿದ್ದರು. ಪ್ರೊ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ, ಹಿಂದೂ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿದ್ದವು.
ರಸ್ತೆಯಲ್ಲೇ ಕ್ರಿಕೆಟ್: ಬಜ್ಪೆಯಲ್ಲಿ ಬಂದನ್ನು ವಿನೂತನ ರೀತಿಯಲ್ಲಿ ಆಚರಿಸಲಾಯಿತು. ಬಸ್ ಸಹಿತ ಯಾವುದೇ ವಾಹನಗಳು ರಸ್ತೆಗಿಳಿಯದ ಕಾರಣ ಕೆಲವು ಉತ್ಸಾಹಿ ಬಜ್ಪೆ ಬಸ್ನಿಲ್ದಾಣದಲ್ಲಿ ಕ್ರಿಕೆಟ್ ಆಡಿ ಬಂದ್ಗೆ ಬೆಂಬಲ ಸೂಚಿಸಿದರು. ಸೋಮವಾರ ಬಜ್ಪೆ ಸಂತೆಯಾಗಿದ್ದರಿಂದ ಹಣ್ಣು, ತರಕಾರಿ ಮೀನು ವ್ಯಾಪಾರಸ್ಥರು ಗ್ರಾಹಕರಿಲ್ಲದೆ ಪರದಾಡಿದರು. ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರು ಕಾಸರಗೋಡು ಮತ್ತಿತರ ದೂರದ ಊರಿಗೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡಬೇಕಾಯಿತು.
ಗುರುಪುರ ಕೈಕಂಬ, ಎಡಪದವು, ಮರವೂರು, ಮಳವೂರು, ಪೆರ್ಮುದೆ ಮುಂತಾದ ಕಡೆ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.