ADVERTISEMENT

ಬಳಕೆಯಾಗದ ಅನುದಾನ- ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 7:05 IST
Last Updated 25 ಫೆಬ್ರುವರಿ 2011, 7:05 IST

ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿಗೆ ಉದ್ಯೋಗ ಖಾತರಿ ಯೋಜನೆಯಡಿ ಮಂಜೂರಾದ  ಅನುದಾನ ಸಮರ್ಪಕವಾಗಿ ಬಳಕೆಯಾಗದೆ ಇರುವ ವಿಷಯ ಇಲ್ಲಿ ನಡೆದ ಗ್ರಾಮ ಸಭೆಯಲ್ಲಿ ಬಹಿರಂಗವಾಗಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸರ್ಕಾರವನ್ನು ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು. ಯೋಜನೆಯ ನೋಡೆಲ್ ಅಧಿಕಾರಿ ಮಾಹಿತಿ ನೀಡಿ ಇಲ್ಲಿ ಪ್ರಸಕ್ತ ಸಾಲಿನಲ್ಲಿ ರೂ. 11 ಲಕ್ಷ ಅನುದಾನ ಮಂಜೂರಾಗಿದೆ. ಆದರೆ ಕೇವಲ ರೂ. 23,587 ಬಳಕೆಯಾಗಿದೆ. ಇನ್ನೂ 11 ಲಕ್ಷ ರೂಪಾಯಿಗೂ ಅಧಿಕ ಹಣ ಉಳಿಕೆಯಾಗಿ ಮಾರ್ಚ್ ವೇಳೆಗೆ ಹಿಂದಕ್ಕೆ ಹೋಗಲಿದೆ ಎಂದರು.

ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಯಾಕೆ ಹೀಗಾಗಿದೆ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಗ್ರಾಮ ಪಂಚಾಯಿತಿಯಲ್ಲಿ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ, ಕ್ರಿಯಾ ಯೋಜನೆ ತಯಾರಿಸಿ ಅದನ್ನು ಗ್ರಾಮ ಪಂಚಾಯಿತಿ ಅನುಷ್ಠಾನ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಯಾಕೆ ಆಗಿಲ್ಲ ಎಂದು ಗೊತ್ತಾಗುತ್ತಿಲ್ಲ ಎಂದರು.

ಇದರಿಂದ ಅಸಮಾಧಾನಗೊಂಡ ಗ್ರಾಮ ಪಂಚಾಯಿತಿ ಸದಸ್ಯರು ಈ ಯೋಜನೆಯ ನಿಯಮ, ಕಾನೂನು ಗೊಂದಲದಿಂದ ಕೂಡಿದೆ. ಕೂಲಿಯವರು ಕೂಡ ರೂ. 250-300ಕ್ಕಿಂತ ಕಡಿಮೆಗೆ ಬರುತ್ತಿಲ್ಲ. ಆದ್ದರಿಂದ  ಯೋಜನೆ ಫಲಪ್ರದವಾಗಿಲ್ಲ. ಕಾನೂನನ್ನು ಸಡಿಲಗೊಳಿಸಬೇಕು ಎಂದು ಸರ್ಕಾರವನ್ನು ಕೋರಿ ನಿರ್ಣಯ ಅಂಗೀಕರಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಉಮೇಶ್ ಶೆಣೈ, ಗ್ರಾಮ ಪಂಚಾಯಿತಿ ಸದಸ್ಯರಾದ ಇಬ್ರಾಹಿಂ, ಸುರೇಶ್, ಅಬ್ದುಲ್ ರಹಿಮಾನ್, ಗ್ರಾಮಸ್ಥರಾದ ವೆಂಕಪ್ಪ ಪೂಜಾರಿ, ವಿಶ್ವನಾಥ, ಆದಂ. ಮಾಲಿಂಗ, ವಿಶ್ವನಾಥ ಶೆಟ್ಟಿ, ಪಂಚಾಯಿತಿ ಕಾರ್ಯದರ್ಶಿ ಜೆರಾಲ್ಡ್ ಮಸ್ಕರೇನಸ್ ಮಾತನಾಡಿದರು.

ಪಂಚಾಯಿತಿ ಉಪಾಧ್ಯಕ್ಷೆ ರುಕ್ಮಿಣಿ, ಸದಸ್ಯರಾದ ಗಂಗಾಧರ, ಅಬ್ದುಲ್ ಜಲೀಲ್, ಗೋಪಾಲ ಹೆಗ್ಡೆ, ಅಬ್ಬಾಸ್ ಬಸ್ತಿಕ್ಕಾರ್, ಹರೀಶ್ ನಾಯಕ್, ಪ್ರಶಾಂತ್, ಉಷಾ ನಾಯಕ್ ಮೊದಲಾದವರು ಇದ್ದರು.

ಪಶು ಸಂಗೋಪನಾ ಇಲಾಖೆಯ ಡಾ. ರಾಮಪ್ರಕಾಶ್ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು. ಉದ್ಯೋಗ ಖಾತರಿ ಯೋಜನೆ ನೋಡೆಲ್ ಅಧಿಕಾರಿ ಧನಲಕ್ಷ್ಮಿ, ಮೆಸ್ಕಾಂ ಇಲಾಖೆಯ ಶೇಷಪ್ಪ ಪೂಜಾರಿ, ಆರೋಗ್ಯ ಇಲಾಖೆಯ ಇಗ್ನೇಷಿಯಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾರತಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಪ್ರಭಾಚಂದ್ರ, ಕೃಷಿ ಇಲಾಖೆಯ ಮಂಜುನಾಥ ಇಲಾಖಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.