ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದಲ್ಲಿ ಆಕಾಶವಾಣಿ ವೃತ್ತದಿಂದ ಬಸ್ ನಿಲ್ದಾಣವರೆಗೆ ಮೇಲ್ಸೇತುವೆ ರಚಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಉಳಿಸಿ ಸಮಿತಿವತಿಯಿಂದ ಇದೇ 15ರಂದು ಸಭೆ ನಡೆಯಲಿದೆ.
ಶನಿವಾರ ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ಬಿ. ಗೋವಿಂದರಾಜ್ ಹೆಗ್ಡೆ ಈ ವಿಷಯ ತಿಳಿಸಿದರು.
ಬ್ರಹ್ಮಾವರದಲ್ಲಿ 7 ಸ್ಪೆನ್ನ ಮೇಲ್ಸೆತುವೆ ಅಥವಾ ನೆಲ ಮಟ್ಟದಲ್ಲಿನ ರಸ್ತೆ ಮಾಡಲೇಬೇಕು ಎನ್ನುವುದು ನಮ್ಮ ಮುಖ್ಯ ಗುರಿ. ಈಗಿರುವ ರೀತಿಯ ರಸ್ತೆ ಮಾತ್ರ ಬೇಡ ಎನ್ನುವುದು ಇಲ್ಲಿನ ಸಾರ್ವಜನಿಕ ಒತ್ತಾಯ ಎಂದರು.
ಕಳೆದ ಫೆ.16ರಂದು ಮೇಲ್ಸೆತುವೆ ರಚಿಸುವಂತೆ ಒತ್ತಾಯಿಸಿ ಸಾಂಕೇತಿಕವಾಗಿ ಧರಣಿಯನ್ನು ಮಾಡಿದ್ದ ಸಮಿತಿ ನಂತರ ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಪತ್ರ ಮೂಲಕ ಮನವಿ ಮಾಡಿತ್ತು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ಇದುವರೆಗೆ ಬಾರದ ಕಾರಣ ಈ ಸಭೆಯನ್ನು ಕರೆಯಲಾಗಿದೆ.
ಈಗಿರುವಂತೆ ಗ್ರಾಮೀಣ ಭಾಗವಾದ ಸಾಲೀಕೇರಿ, ಹೊನ್ನಾಳ, ಬಾರ್ಕೂರು, ಮಂದಾರ್ತಿ, ನೀಲಾವರ, ಕುಂಜಾಲುಗಳಿಂದ ಪ್ರತೀ ದಿನ ನೂರಾರು ಬಸ್ಗಳು ಬಸ್ಸು ನಿಲ್ದಾಣಕ್ಕೆ ಬರಲು ಸಮಸ್ಯೆಯಾಗುತ್ತದೆ. ರಚನೆಯಾಗಿರುವ ಅಂಡರ್ ಪಾಸ್ನಿಂದ ನಗರ ಇಬ್ಭಾಗವಾಗಿ ವಾಣಿಜ್ಯ ಕೇಂದ್ರಗಳಿಗೆ, ಕಚೇರಿಗಳು, ಅಂಗನವಾಡಿ, ಶಾಲೆ, ಕಾಲೇಜಿಗೆ ಹೋಗುವವರಿಗೆ ಸಮಸ್ಯೆ ತಂದೊಡ್ಡಲಿದೆ ಎಂದರು. ಸಭೆಯಲ್ಲಿ ವಿಠಲ ಪೂಜಾರಿ, ಮೋಹನ್ ಶೆಟ್ಟಿ , ಸದಾಶಿವ ಪೂಜಾರಿ, ರಾಜು ಪೂಜಾರಿ, ಆನಂದ್ ಟೈಲರ್, ರತ್ನಾಕರ ಶೆಟ್ಟಿ, ಅಶೋಕ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಸೀತಾರಾಮ ಪೂಜಾರಿ, ಸೀತಾರಾಮ ಶೆಟ್ಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.