ADVERTISEMENT

ಮಂಗಳೂರಿನಲ್ಲಿ ದಸರಾ ವೈಭವ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 9:20 IST
Last Updated 1 ಅಕ್ಟೋಬರ್ 2017, 9:20 IST
ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಶಾರದೆಯ ವಿಗ್ರಹವನ್ನು ಶನಿವಾರ ಸಂಜೆ ಮೆರವಣಿಗೆಗಾಗಿ ಹೊತ್ತು ತರುತ್ತಿರುವುದು.
ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಶಾರದೆಯ ವಿಗ್ರಹವನ್ನು ಶನಿವಾರ ಸಂಜೆ ಮೆರವಣಿಗೆಗಾಗಿ ಹೊತ್ತು ತರುತ್ತಿರುವುದು.   

ಮಂಗಳೂರು: ಇಲ್ಲಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ನೇತೃತ್ವದಲ್ಲಿ ನಡೆಯುತ್ತಿರುವ ವರ್ಣರಂಜಿತ ಮಂಗಳೂರು ದಸರಾ ಮೆರವಣಿಗೆಗೆ ಶನಿವಾರ ಸಂಜೆ 6.15ಕ್ಕೆ ಚಾಲನೆ ದೊರೆಯಿತು. ನವದುರ್ಗೆಯರು, ಗಣಪತಿ ಮತ್ತು ಶಾರದೆಯ ವಿಗ್ರಹಗಳನ್ನು ಹೊತ್ತ ಮೆರವಣಿಗೆಯು ನಗರದ ವಿವಿಧ ಪ್ರದೇಶಗಳನ್ನು ಹಾದು ಶನಿವಾರ ಬೆಳಿಗ್ಗೆ ಕುದ್ರೋಳಿ ದೇವಸ್ಥಾನದಲ್ಲಿ ಸಮಾಪ್ತಿಗೊಳ್ಳಲಿದೆ.

ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಹಿರಿಯ ಮುಖಂಡರಾಗಿರುವ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಶನಿವಾರ ಸಂಜೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದಸರಾ ಮೆರವಣಿಗೆಗೆ ಚಾಲನೆ ನೀಡಲಾಯಿತು. 70ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು, 30ಕ್ಕೂ ಹೆಚ್ಚು ಹುಲಿ ಕುಣಿತದ ತಂಡಗಳು, ಚೆಂಡೆ, ಕೊಂಬು, ಕಹಳೆ ಸೇರಿದಂತೆ ಹಲವು ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ.

ರಾಜ್ಯದ ವಿವಿಧೆಡೆಯಿಂದ ಬಂದಿರುವ ಸಹಸ್ರಾರು ಮಂದಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ವಿದೇಶಿ ಪ್ರವಾಸಿಗರು ಕೂಡ ಈ ಬಾರಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆ ಪ್ರಯುಕ್ತ ಮಂಗಳೂರು ನಗರದ ಬಹುತೇಕ ಭಾಗಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.

ADVERTISEMENT

ಕುದ್ರೋಳಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಲೇಡಿಹಿಲ್‌ ಮಾರ್ಗವಾಗಿ ಸಾಗಿ ಎಂ.ಜಿ.ರಸ್ತೆ, ಹಂಪನಕಟ್ಟೆ, ರಥಬೀದಿ ಮೂಲಕ ಸಾಗಿ ಪುನಃ ಕುದ್ರೋಳಿಗೆ ಬರಲಿದೆ. ದಸರಾ ಮೆರವಣಿಯನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾವಿರಾರು ಮಂದಿ ವೀಕ್ಷಿಸಿದರು. ಹಲವು ಸ್ಥಳಗಳಲ್ಲಿ ಮೆರವಣಿಗೆ ಸ್ವಾಗತಿಸಲು ವಿಶೇಷ ವೇದಿಕೆಗಳನ್ನು ಸಜ್ಜುಗೊಳಿಸಲಾಗಿತ್ತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.