ಕಡಬ (ಉಪ್ಪಿನಂಗಡಿ): `ಸರ್ಕಾರಗಳು ಯೋಜನೆಗಳನ್ನು ರೂಪಿಸುತ್ತವೆ. ಅನುದಾನಗಳನ್ನು ಬಿಡುಗಡೆ ಮಾಡುತ್ತದೆ. ಆದರೆ ಅದರ ಅನುಷ್ಠಾನ ಮತ್ತು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಗ್ರಾಮಸ್ಥರಲ್ಲೂ ಇಚ್ಚಾಶಕ್ತಿ ಬೇಕು. ಆಗ ಅವು ಯಶಸ್ವಿಯಾಗಿ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ~ ಎಂದು ಸುಳ್ಯ ಶಾಸಕ ಅಂಗಾರ ಹೇಳಿದರು.
ಪೆರಾಬೆ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ನೂತನ ಕಚೇರಿಯನ್ನುಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆ ಮೂಲಕ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು. ಆದರೆ ಯಾರೂ ಸರಿಯಾಗಿ ಮುಂದೆ ಬರುತ್ತಿಲ್ಲ ಎಂದು ವಿಷಾದಿಸಿದ ಅವರು ಗ್ರಾಮಸ್ಥರು ಸಹಕಾರಿಗಳಾಗಿ ಮುಂದೆ ಬಂದರೆ ಗ್ರಾಮದ ಅಭಿವೃದ್ಧಿಯೊಂದಿಗೆ ಪ್ರತಿ ಪ್ರಜೆಯೂ ಪ್ರಗತಿ ಹೊಂದಬಹುದು ಎಂದರು.
ಬಲ್ಯ-ನೆಲ್ಯಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಬಾರ್ಡ್ ಮತ್ತು ಮುಖ್ಯಮಂತ್ರಿ ಸಡಕ್ ಯೋಜನೆಯಲ್ಲಿ 2.50 ಕೋಟಿ ರೂಪಾಯಿ, ಪೆರಾಬೆ ಗ್ರಾಮದ ಬೀಜದಗುಂಡಿ ಎಂಬಲ್ಲಿ ಕಿಂಡಿ ಅಣೆಕಟ್ಟು ಯೋಜನೆಗೆ 40 ಲಕ್ಷ ರೂಪಾಯಿ ಮಂಜೂರು ಆಗಿದೆ. ಸರ್ಕಾರದ ಯಾವುದೇ ಯೋಜನೆ ವಿಫಲಗೊಳಿಸುವ, ಹಾನಿಗೆಡಹುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಆಡಳಿತಕ್ಕೆ ಮತ್ತು ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಭಟ್ ಮಾತನಾಡಿ ಪ್ರತಿಯೊಂದು ಶಾಲೆ ಮತ್ತು ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಮತ್ತು ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತಗಳು ಮುತುವರ್ಜಿ ವಹಿಸಬೇಕು ಎಂದರು.
ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಾರತ್ನ ವಸಂತ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಂಭು ಭಟ್, ಜಿಲ್ಲಾ ಪಂಚಾಯಿತಿ ಸದಸ್ಯ ಬಾಲಕೃಷ್ಣ ಬಾಣಜಾಲು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ತಾ.ಪಂ. ಸದಸ್ಯ ದಯಾನಂದ ಆಲಡ್ಕ, ಕಡಬ ವಿಶೇಷ ತಹಶೀಲ್ದಾರ್ ವೈದ್ಯನಾಥ್, ಪುತ್ತೂರು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಜಯಾನಂದ ಪೂಜಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನ್ವೀರ್ ಮಾತನಾಡಿದರು.
ಸನ್ಮಾನ: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶೇಷಪ್ಪ ಶೆಟ್ಟಿ, ಲಿಂಗಪ್ಪ ಗೌಡ, ನಾರಾಯಣ ಭಟ್ರನ್ನು ಪಂಚಾಯಿತಿ ವತಿಯಿಂದ ಶಾಸಕರು ಸನ್ಮಾನಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ರಾಯ್ ಅಬ್ರಹಾಂ ಸ್ವಾಗತಿಸಿ, ಉಪಾಧ್ಯಕ್ಷ ವಸಂತ ವಂದಿಸಿದರು. ಗೋವಿಂದ ನಾಯ್ಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.