ADVERTISEMENT

ರೂಪಾಂತರಿಸಿದ ಮಾಹಿತಿ ಬಳಸಲು ಸಲಹೆ

ವಿಕಿಪೀಡಿಯಕ್ಕೆ ಪಿಲಿಕುಳ ನಿಸರ್ಗಧಾಮದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2016, 5:44 IST
Last Updated 15 ಫೆಬ್ರುವರಿ 2016, 5:44 IST
ಮಂಗಳೂರಿನ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಭಾನುವಾರ ನಡೆದ ಕನ್ನಡ ವಿಕಿಪೀಡಿಯ 13ನೇ ವರ್ಷಾಚರಣೆಯಲ್ಲಿ ಗಣಕ ವಿಜ್ಞಾನಿ ಕೆ.ಪಿ.ರಾವ್‌ ಅವರನ್ನು ಸನ್ಮಾನಿಸಲಾಯಿತು. ಪ್ರಜಾವಾಣಿ ಚಿತ್ರ
ಮಂಗಳೂರಿನ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಭಾನುವಾರ ನಡೆದ ಕನ್ನಡ ವಿಕಿಪೀಡಿಯ 13ನೇ ವರ್ಷಾಚರಣೆಯಲ್ಲಿ ಗಣಕ ವಿಜ್ಞಾನಿ ಕೆ.ಪಿ.ರಾವ್‌ ಅವರನ್ನು ಸನ್ಮಾನಿಸಲಾಯಿತು. ಪ್ರಜಾವಾಣಿ ಚಿತ್ರ   

ಮಂಗಳೂರು: ಸೇಂಟ್‌ ಅಲೋಶಿಯಸ್‌ ಕಾಲೇಜು ಕನ್ನಡ, ಬಿಸಿಎ ವಿಭಾಗ, ಸೆಂಟರ್‌ ಫಾರ್‌ ಇಂಟರ್‌ನೆಟ್‌ ಅಂಡ್‌್ ಸೊಸೈಟಿ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಕನ್ನಡ ವಿಕಿಪೀಡಿಯ 13ನೇ ವರ್ಷಾಚರಣೆ ನಡೆಯಿತು.

ನಗರದ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಭಾನುವಾರ ನಡೆದ ಸಂಪಾದನೋತ್ಸವದಲ್ಲಿ ಪಿಲಿಕುಳ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಬಗೆಗಿನ ಮಾಹಿತಿಯನ್ನು ವಿಕಿಪೀಡಿಯಕ್ಕೆ ಸೇರಿಸಲಾಯಿತು. ಕಾಲೇಜಿನ 58 ವಿದ್ಯಾರ್ಥಿಗಳ 7 ತಂಡಗಳು ಪಿಲಿಕುಳದಲ್ಲಿ ಶನಿವಾರ ಛಾಯಾಚಿತ್ರಗಳನ್ನು ತೆಗೆದು ವಿಕಿಪೀಡಿಯಕ್ಕೆ ಸೇರಿಸಿದವು.

ಕನ್ನಡ ವಿಕಿಪೀಡಿಯ 13ನೇ ವರ್ಷಾಚರಣೆಗೆ ಗಣಕ ವಿಜ್ಞಾನಿ ಕೆ.ಪಿ.ರಾವ್‌ ಚಾಲನೆ ನೀಡಿ ಮಾತನಾಡಿ, ‘ಒಂದೊಂದು ಭಾಷೆಗೆ ತನ್ನದೇ ಆದ ಸೊಗಡಿದೆ. ಅದನ್ನು ಬಳಸಿಕೊಂಡು ಮಾಹಿತಿಯನ್ನು ವಿಕಿಪೀಡಿಯಕ್ಕೆ ಸೇರಿಸಬೇಕು. ಅನೇಕ ವಿಷಯಗಳನ್ನು ಭಾಷಾಂತರ ಮಾಡಿ ಹೇಳಲು ಆಗುವುದಿಲ್ಲ, ಆದ್ದರಿಂದ ಅನೇಕ ಮಾಹಿತಿಗಳನ್ನು ಭಾಷಾಂತರ ಮಾಡುವುದಕ್ಕಿಂತ ರೂಪಾಂತರ ಮಾಡಿ ವಿಕಿಪೀಡಿಯಗೆ ಸೇರಿಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ವ್ಯವಸ್ಥಾಪಕ ಯು.ಬಿ ಪವನಜ ಮಾತನಾಡಿ, ‘ಪ್ರಪಂಚ ಜ್ಞಾನವನ್ನು ಕನ್ನಡಕ್ಕೆ ತರದ ಕಾರಣ, ಕನ್ನಡವನ್ನು ಜನರು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಪ್ರಪಂಚ ಜ್ಞಾನವನ್ನು ಕನ್ನಡಕ್ಕೆ ತಂದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ. ಕನ್ನಡಕ್ಕೆ ಸಾಹಿತ್ಯ ಕೃಷಿಯ ಜತೆ ಜತೆಗೆ ವಿಜ್ಞಾನ, ಕಾನೂನು, ವೈದ್ಯಕೀ ವಿಜ್ಞಾನ ಸೇರಿದಂತೆ ಅನೇಕ ಮಾಹಿತಿ ಸಾಹಿತ್ಯ ಬೆಳೆಯಬೇಕು. ಇದರಿಂದ ಕನ್ನಡದಲ್ಲೇ ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ಕನ್ನಡ ವಿಕಿಪೀಡಿಯದಲ್ಲಿ ಅನೇಕ ವಿಷಯಗಳನ್ನು ಸೇರಿಸಲು ನಿರಂತರವಾಗಿ ಸಂಪಾದನೋತ್ಸವಗಳನ್ನು ನಡೆಸಲಾಗುತ್ತದೆ. ಈ ಮೊದಲು ಸಂಪಾದನೋತ್ಸವ ನಡೆಸಲಾದ ಕಾಲೇಜುಗಳನ್ನೇ ಪುನಃ ಆಯ್ಕೆ ಮಾಡಿಕೊಂಡು ಸಂಪಾದನೋತ್ಸವಗಳನ್ನು ಆಯೋಜಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸೇಂಟ್‌ ಅಲೋಶಿಯಸ್‌ ಕಾಲೇಜಿನ ಪ್ರಾಂಶುಪಾಲ ಫಾ. ಸ್ವೀಬರ್ಟ್‌ ಡಿಸಿಲ್ವ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಆಕಾಶವಾಣಿಯ ಡಾ.ವಸಂತ ಕುಮಾರ ಪೆರ್ಲ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎಸ್‌.ಎ. ಪ್ರಭಾಕರ ಶರ್ಮ, ಬಿಸಿಎ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸರಸ್ವತಿ, ಕನ್ನಡ ವಿಕಿಪೀಡಿಯ 13ನೇ ವರ್ಷಾಚರಣೆಯ ಸಂಚಾಲಕ ಡಾ. ವಿಶ್ವನಾಥ ಬದಿಕಾನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.