ಉಳ್ಳಾಲ: ‘ ಮಾನನಷ್ಟ ಮೊಖದ್ದಮೆ ಹಾಕುವುದಾದರೆ ಮೊದಲು ದರ್ಗಾ ಕಚೇರಿಗೆ ಬೀಗ ಹಾಕಿದ ವಕ್ಪ್ ಅಧಿಕಾರಿಗಳ ಮೇಲೆ ಹಾಕಬೇಕಾಗಿದೆ’ ಎಂದು ಸೈಯ್ಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಪಿ.ಎಸ್. ಮಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಅಭಿಪ್ರಾಯಪಟ್ಟರು.ಸಯ್ಯದ್ ಮದನಿ ದರ್ಗಾದ ಅನಧಿಕೃತ ಸಮಿತಿಯ ವಿರುದ್ಧ ತೊಕ್ಕೊಟ್ಟು ಕೇಂದ್ರ ಬಸ್ ನಿಲ್ದಾಣದ ಬಳಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ದರ್ಗಾದ ಸಂವಿಧಾನ ಪುಸ್ತಕಕ್ಕೆ ವಿರೋಧವಾಗಿ ಹೋದವರು ಅಧಿಕೃತವೇ ಅಥವಾ ಅನಧಿಕೃತವೇ ಎನ್ನುವುದನ್ನು ಜನರು ತೀರ್ಮಾನಿಸಬೇಕಾಗಿದ್ದು, ಇಂತಹ ಕೃತ್ಯವನ್ನು ಮಾಡಿರುವ ದರ್ಗಾ ಅಧಿಕಾರ ಅನಧಿಕೃತವಾಗಿದ್ದು, ಇದನ್ನು ಹೇಳಿದವರ ವಿರುದ್ಧ ಮೊಕದ್ದಮೆ ಹಾಕಲಾಗಿದೆ. ಹಾಗಿದ್ದಲ್ಲಿ ದರ್ಗಾಕ್ಕೆ ಬೀಗ ಹಾಕಿದ ವಕ್ಫ್ ಅಧಿಕಾರಿಗಳ ವಿರುದ್ಧವೂ ಮೊಕದ್ದಮೆ ದಾಖಲಿಸ ಬೇಕಲ್ಲವೇ ಎಂದು ಅವರು ಪ್ರಶ್ನಿಸಿದರು.
‘ದರ್ಗಾ ಸಂವಿಧಾನ ಪ್ರಕಾರ ಖಾಝಿ ಅವರ ತೀರ್ಮಾನ ಅಂತಿಮ. ಆದರೆ ದರ್ಗಾ ಅಧಿಕಾರ ವಹಿಸಿಕೊಳ್ಳುವ ಸಂದರ್ಭ ಖಾಝಿಯವರನ್ನು ಧಿಕ್ಕರಿಸಿ ನಿಯಮ ಕಡೆಗಣಿಸಿ ಅಧಿಕಾರ ವಹಿಸಿಕೊಂಡಿದ್ದಾರೆ. ಈಗಿನ ಖಾಝಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ತಾಜುಲ್ ಉಲಮಾ ಇದ್ದಾಗಲೇ ಅವರ ವಿರೋಧ ಇದ್ದರೂ ದರ್ಗಾ ಮುಂಭಾಗದ ಮಸೀದಿಯಲ್ಲಿ ಜುಮಾ ಆರಂಭಿಸಲಾಗಿದೆ. ತಾಜುಲ್ ಉಲಮಾರನ್ನು ಕಡೆಗಣಿಸಿದ ಯಾವುದೇ ಮುಸಲ್ಮಾನರು ಮುಂದಕ್ಕೆ ಹೋಗಲು ಸಾಧ್ಯವಿಲ್ಲ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಗೌರವಾಧ್ಯಕ್ಷ ಯು.ಎಸ್.ಹಂಝ ಮಾತನಾಡಿ, ‘ಈಗಿನ ಸಮಿತಿ ಖಾಝಿ ಕೂರತ್ ತಂಙಳ್ ಅವರನ್ನು ಧಿಕ್ಕರಿಸಿ ಮುನ್ನಡೆಯುತ್ತಿದೆ. ಖಾಝಿಯವರ ಮಾರ್ಗದರ್ಶನ ಇಲ್ಲದ ಕಾರಣ ಆಡಳಿತ ಲಂಗು ಲಗಾಮಿಲ್ಲದಂತಾಗಿದೆ. ಸರ್ಕಾರದ ಆದೇಶ ನಿರ್ಲಕ್ಷಿಸಿ ಮದರಸದ ಹೊಸ ಪುಸ್ತಕ ಜಾರಿಗೆ ತರಲಾಗಿದೆ. ಜಮಾತ್ಗಳ ಸಂಬಳ ಬಾಕಿಯಿಡಲಾಗಿದೆ. ಸಂಬಳ ನೀಡದಿದ್ದರೂ ಚಿಂತೆಯಿಲ್ಲ, ಪುಸ್ತಕ ಪಡೆಯುವುದಿಲ್ಲ’ ಎಂದರು.
ಪ್ರತಿಭಟನೆಯನ್ನು ಎಂ.ಸಿ. ಮಹಮ್ಮದ್ ಫೈಝಿ ಪಟ್ಲ ಉದ್ಘಾಟಿಸಿದರು. ಅಬುಝಿಯಾದ್ ಪಟ್ಟಾಂಬಿ ಉಸ್ತಾದ್ ದುವಾ ನೆರವೇರಿಸಿದರು.
ಪ್ರತಿಭಟನೆಯಲ್ಲಿ ಸೈಯಿದ್ ಜಲಾಲ್ ತಂಗಳ್, ವಕ್ಪ್ ಸಮಿತಿ ಸದಸ್ಯ ಅಲ್ತಾಫ್ ಕುಂಪಲ, ಶರೀಫ್ ಸಅದಿ ಸುಂದರಿಬಾಗ್, ಉಸ್ಮಾನ್ ಜೌಹರಿ ಕಲ್ಲಾಪು, ಅಶ್ರಫ್ ಬಳ್ಳಾರಿ, ಯೂಸುಫ್ ಹಳೇಕೋಟೆ, ಅಬ್ದುಲ್ ಖಾದರ್ ಮಾರ್ಗತಲೆ, ಸೈಯ್ಯದ್ ಖುಬೈದ್ ತಂಗಳ್, ಜಮಾಲ್ ಮುಸ್ಲಿಯಾರ್, ಜಮಾಲ್ ಮುಸ್ಲಿಯಾರ್ ಮಂಚಿಲ, ಯೂನಸ್ ಇಮ್ದಾದಿ, ಮುಸ್ತಾಫ ಮದನಿ, ಹಮೀದ್ ಮಂಚಿಲ, ಮಕ್ಸೂದ್ ಮಂಚಿಲ, ಯು.ಡಿ. ಅಶ್ರಫ್, ಅಝೀಝ್ ಸಖಾಫಿ, ಕೆ. ಮೆಹಮೂದ್ ಖಂಡಿಗ, ಬಶೀರ್ ಸಖಾಫಿ, ಮಹಮ್ಮದ್ ಮದನಿ ಜಪ್ಪು, ರವೂಫ್ ಬಿಲ್ಡ್ ವೇರ್, ಮಲಹರಿ ಉಸ್ತಾದ್, ರಪೀಕ್ ಮದನಿ ಹಳೆಕೋಟೆ, ಸೀದಿಯಬ್ಬ ಸುಂದರಿಬಾಗ್,ಝಿಯಾದ್ ತಂಙಲ್,ಇಸ್ಮಾಯಿಲ್ ಸೆಂವತಿಗುಡ್ಡೆ, ಎಲ್ಲಾ ಮೊಹಲ್ಲಾಗಳಾ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಮುದರ್ರಿಸ್, ಖತೀಬರು ಉಪಸ್ಥಿತರಿದ್ದರು.
ಅಶ್ರಫ್ ಸುಳ್ಯ ಸ್ವಾಗತಿಸಿದರು. ಮುಸ್ತಾಫ ಮಾಸ್ತರ್ ಮುಕ್ಕಚ್ಚೇರಿ ಕಾರ್ಯಕ್ರಮ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.