ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಮಂಗಳೂರಿನ ಬದ್ರಿಯಾ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಬ್ಯಾರಿ ಸಾಹಿತ್ಯ ಕಮ್ಮಟ’ ಉದ್ಘಾಟಿಸಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಮಾತನಾಡಿದರು
ಮಂಗಳೂರು: ‘ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಗೆ ಜೋತು ಬೀಳದೆ, ಪಠ್ಯಕ್ಕೆ ಹೊರತಾದ ಸಾಹಿತ್ಯ ಕಥರಿಗಳನ್ನೂ ಓದಿ ಜ್ಞಾನ ಸಂಪಾದಿಸಬೇಕು. ಸಾಹಿತ್ಯ ಕೃತಿಗಳು ಕೀಳರಿಮೆಗಳನ್ನು ಹೋಗಲಾಡಿಸಿ ಆತ್ಮವಿಶ್ವಾಸ ಮೂಡಿಸಲು ನೆರವಾಗುತ್ತವೆ’ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ನಗರದ ಬದ್ರಿಯಾ ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ಬದ್ರಿಯಾ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಬ್ಯಾರಿ ಸಾಹಿತ್ಯ ಕಮ್ಮಟ’ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಿದರೆ ಮಾತ್ರ ಸಾಧಕರಾಗಬಹುದು. ಕನಸುಗಾರರಾಗಿ ಬೆಳೆಯಬೇಕಾದ ಯುವಜನಾಂಗ ಮಾತೃ ಭಾಷೆಯ ಸೇವೆಗೂ ಮುಂದಾಗಬೇಕು’ ಎಂದರು.
ಬದ್ರಿಯಾ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಸೀಮಾ ಎ.ಕೆ. ಮುಖ್ಯ ಅತಿಥಿಯಾಗಿದ್ದರು. ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಉಳ್ಳಾಲ ಘಟಕದ ಅಧ್ಯಕ್ಷೆ ಸಿಹಾನ ಬಿ.ಎಂ. ಸಂಪನ್ಮೂಲ ವ್ಯಕಿಯಾಗಿ ಬ್ಯಾರಿ ಸಾಹಿತ್ಯ ಕಮ್ಮಟ ನಡೆಸಿಕೊಟ್ಟರು.
ಕಾರ್ಯಕ್ರಮದ ಸಂಚಾಲಕಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಶಮೀರಾ ಜಹಾನ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಯು. ಎಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಅಬ್ದುಲ್ ರಹೀಮ್ ವಂದಿಸಿದರು.
ಅಕಾಡೆಮಿ ಸದಸ್ಯರಾದ ಹಾಜಿ ಯು.ಕೆ. ಹಮೀದ್, ಹಮೀದ್ ಹಸನ್ ಮಾಡೂರು, ಬಿ.ಎಸ್. ಮುಹಮ್ಮದ್, ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ, ಬದ್ರಿಯಾ ಪ.ಪೂ ಕಾಲೇಜಿನ ಮಾಜಿ ಪ್ರಾಂಶುಪಾಲ ಯೂಸುಫ್ ಡಿ., ಪ್ರಾಧ್ಯಾಪಕ ಸಫ್ವಾನ್ ಕೆ., ಪುಟ್ಟಸ್ವಾಮಿ ಹಾಗೂ ಯಾಕೂಬ್ ಕಲ್ಲರ್ಪೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.