ಸುಬ್ರಹ್ಮಣ್ಯ: `ಪ್ರಾಚೀನ ಕಾಲದ ಕಲೆ, ಸಂಸ್ಕೃತಿ, ಭಾಷೆಯ ಆಗರವಾದ ಶಾಸನಗಳ ಅಧ್ಯಯನ ಇಂದಿನ ಅಗತ್ಯ~ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮೈಸೂರಿನ ಭಾಷಾ ಸಂಸ್ಥಾನಗಳ ಒಕ್ಕೂಟ, ವೇದವ್ಯಾಸ ಸಂಶೋಧನ ಕೇಂದ್ರ, ಶ್ರೀನಿಕೇತನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ವನದುರ್ಗಾ ದೇವಳದ ಸಭಾಂಗಣದಲ್ಲಿ ಶುಕ್ರವಾರ ನಡೆದ `ಕನ್ನಡ ಶಾಸನಗಳ ಭಾಷೆ ಮತ್ತು ಸಂಸ್ಕೃತಿ~ ವಿಷಯದ ಕುರಿತು ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
`ಲಿಪಿಕಾರರಿಗೆ ಇರುವ ಸ್ವಾತಂತ್ರ್ಯ ಶಾಸನಕಾರರಿಗೆ ಇಲ್ಲ. ಶಾಸನಗಳ ಬಗ್ಗೆ ಸಾಕಷ್ಟು ಕೆಲಸವಾದರೂ ಅನುಪಲಬ್ಧ ಶಾಸನಗಳ ದಾಖಲೀಕರಣ ಅಗತ್ಯವಾಗಿದೆ. ಹಸ್ತಪ್ರತಿಗಳ ವಿವರಣಾತ್ಮಕ ಸೂಚಿಯೊಂದಿಗೆ ಸಾಂಸ್ಕೃತಿಕ ಚಿತ್ರಣವನ್ನು ಶಾಸನಗಳಿಂದ ರಚಿಸುವಂತಾಗಬೇಕು. ಶಾಸನಗಳ ಅಧ್ಯಯನ ಮುಂದಿನ ತಲೆಮಾರಿಗೂ ಪ್ರವಹಿಸಲು ಇಂತಹ ಕಾರ್ಯಗಾರಗಳು ಪೂರಕ~ ಎಂದು ಅತಿಥಿಯಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಎ.ವಿ.ನಾವಡ ಹೇಳಿದರು.
ಇತಿಹಾಸ ತಜ್ಞ ಮುಕುಂದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಭಾಷಾ ಸಂಸ್ಥಾನಗೋ ಒಕ್ಕೂಟದ ಸಂಯೋಜಕ ಸಣ್ಣಪಾಪಯ್ಯ, ವೇದವ್ಯಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಚಂದ್ರಶೇಖರ್ ದಾಮ್ಲೆ, ಶ್ರೀಶಕುಮಾರ್ ಹಾಗೂ ಮತ್ತಿತತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.