ADVERTISEMENT

ಸಂಸ್ಕೃತಿಯನ್ನು ಶಾಶ್ವತವಾಗಿ ಉಳಿಸಿ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:28 IST
Last Updated 5 ಏಪ್ರಿಲ್ 2013, 9:28 IST

ಮೂಡುಬಿದಿರೆ: `ದೇಶೀಯ ಸಂಸ್ಕೃತಿಗೆ ಮನಸ್ಸು, ಪ್ರಾಣ, ಜ್ಞಾನ ಸಹಿತ ಪಂಚಕೋಶಗಳನ್ನು ಅರಳಿಸುವ ಶಕ್ತಿ ಇದೆ. ಆ ಮೂಲಕ ಆನಂದವನ್ನು ಪಡೆಯುವ ನಾವು ದೇಶದ ಸಂಸ್ಕೃತಿಯನ್ನು ಶಾಶ್ವತವಾಗಿ ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ' ಎಂದು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಹೇಳಿದರು.

ಮಿಜಾರಿನ ಅಳ್ವಾಸ್ ಕಾಲೇಜಿನಲ್ಲಿ ಗುರುವಾರ ನಡೆದ `ಪರಂಪರಾ ದಿನ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಪರಂಪರೆಯ ಸಾಂಸ್ಕೃತಿಕ ನೃತ್ಯ ಹಾಗೂ ಹಾಡುಗಳು ನಮ್ಮ ಮನಕ್ಕೆ ಮುದ ನೀಡುತ್ತವೆ. ವಿದ್ಯೆ ಕೇವಲ ಕಲಿಕೆ, ದುಡಿಮೆಗೆ ಸೀಮಿತವಾಗಿರದೆ ಬದುಕಿಗೆ ಸಂತೋಷವನ್ನು ನೀಡಬೇಕು. ಈ ನಿಟ್ಟಿನಲ್ಲಿ ಎಂಜಿನಿಯರ್‌ಗಳು ದೇಶಕ್ಕೆ ಅಪಾರವಾದ ಕೊಡುಗೆ ನೀಡಬೇಕಾಗಿದೆ' ಎಂದು ಹೇಳಿದರು.

ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ, ಸಂಸ್ಕೃತಿ ಮತ್ತು ಮಾನವ ಸಂಪತ್ತು ನಮ್ಮ ದೇಶದ ಬಹು ದೊಡ್ಡ ಆಸ್ತಿ. ಸಂಸ್ಕೃತಿ ನಾಶವಾದರೆ ಮಾನವೀಯತೆ ನಾಶವಾಗುವುದು' ಎಂದರು. 

ಮೀನಾಕ್ಷಿ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಡೀನ್ ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.ರುಚಿದಾನಂದ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಆಶ್ರಯ ಮತ್ತು ದೀಪ್ತಿ ಶೆಟ್ಟಿ  ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ದೇಶದ ಸಂಸ್ಕೃತಿ ಕಲೆಯನ್ನು ಬಿಂಬಿಸುವ ನೃತ್ಯ, ಹಾಡು ಮತ್ತು  ರೂಪಕಗಳು ಪ್ರದರ್ಶನಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.