ADVERTISEMENT

ಸರ್ಕಾರಿ ಬಸ್ ತಡೆದರೆ ಹೋರಾಟ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2012, 7:00 IST
Last Updated 6 ನವೆಂಬರ್ 2012, 7:00 IST
ಸರ್ಕಾರಿ ಬಸ್ ತಡೆದರೆ ಹೋರಾಟ
ಸರ್ಕಾರಿ ಬಸ್ ತಡೆದರೆ ಹೋರಾಟ   

ಮುಡಿಪು: ಮುಡಿಪು ಭಾಗದಲ್ಲಿ ಸಂಚರಿಸುತ್ತಿರುವ ಸರ್ಕಾರಿ ಬಸ್‌ಗಳಿಂದಾಗಿ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಿದೆ.

ಆದರೆ ಇದೀಗ ಖಾಸಗಿ ಬಸ್ ಮಾಲಕರು ತಮ್ಮ ಲಾಭಕ್ಕಾಗಿ ಸರ್ಕಾರಿ  ಬಸ್‌ಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕರವೇ ನೇತೃತ್ವದಲ್ಲಿ ಈ ಭಾಗದ ನಾಗರಿಕರು ಸೇರಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಪಜೀರು ಗ್ರಾ.ಪಂ.ಅಧ್ಯಕ್ಷ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮೊಯಿದಿನ್ ಅರ್ಕಾಣ ಎಚ್ಚರಿಸಿದ್ದಾರೆ.

ಸರ್ಕಾರಿ ಬಸ್ ಸೇವೆ ಮೊಟಕುಗೊಳಿಸುವುದನ್ನು ವಿರೋಧಿಸಿ ಕರಾವೇ ಹಾಗೂ ಮುಡಿಪು ನಾಗರಿಕರ ವತಿಯಿಂದ ಸೋಮವಾರ ಇಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ದಾಸ್ ರೈ ಮಾತನಾಡಿ, ಮುಡಿಪು ಪ್ರದೇಶಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭವಾದಾಗಿನಿಂದ ಖಾಸಗಿ ಬಸ್ ಮಾಲಕರು ಇದನ್ನು ತಡೆ ಹಿಡಿಯಲು ಭಾರಿ ಪ್ರಯತ್ನ ನಡೆಸುತ್ತ ಬಂದಿದ್ದಾರೆ. 

ಈ ಭಾಗದ ವಿದ್ಯಾರ್ಥಿಗಳಿಂದ ಹಿಡಿದು ನಾಗರಿಕರಿಗೆ ಸರ್ಕಾರಿ ಬಸ್ ಸಂಚಾರದಿಂದ ಬಹಳಷ್ಟು ಅನುಕೂಲವಾಗಿದೆ. ಆದರೆ ಜಿಲ್ಲಾಧಿಕಾರಿ ಅವರು ಇದೀಗ ಹಠಾತ್ತಾಗಿ ಸರ್ಕಾರಿ ಬಸ್‌ಗಳ ಟ್ರಿಪ್‌ಗಳನ್ನು ಕಡಿತಗೊಳಿಸಿ ಬೇರೆ ಕಡೆಗಳಲ್ಲಿ ಓಡುವಂತೆ ಮಾಡಿ ಜನರಿಗೆ ಅನ್ಯಾಯ ಎಸಗಿದ್ದಾರೆ. ಇದಕ್ಕೆ ಅವಕಾಶ ನೀಡಲಾಗದು ಎಂದರು.

ಇದೇ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಖಾಸಗಿ ಬಸ್ ಮಾಲಕರು ಹಾಗೂ ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿದರು. ಕರವೇ ಗೌರವಾಧ್ಯಕ್ಷ ಖಾದರ್, ಪ್ರಧಾನ ಕಾರ್ಯದರ್ಶಿ ಹಮೀದ್ ಕೀನ್ಯಾ, ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಇಸ್ಮಾಯಿಲ್, ಜಲೀಲ್, ಮಧುಸೂದನ್, ಬಶೀರ್ ಕೃಷ್ಣಪ್ಪ, ಹುಸೈನ್ ಇನ್ನಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.