ADVERTISEMENT

ಹೆದ್ದಾರಿಗೆ ಬಿದ್ದ ಮರ-ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 10:04 IST
Last Updated 22 ಜುಲೈ 2013, 10:04 IST
ಕೊಣಾಜೆ ಬೆಳ್ಮದ ಗದ್ದೆಯೊಂದರಲ್ಲಿ ಭಾನುವಾರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಮಹಿಳೆಯರು. 	(ಮುಡಿಪು ಚಿತ್ರ)
ಕೊಣಾಜೆ ಬೆಳ್ಮದ ಗದ್ದೆಯೊಂದರಲ್ಲಿ ಭಾನುವಾರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಮಹಿಳೆಯರು. (ಮುಡಿಪು ಚಿತ್ರ)   

ವಿಟ್ಲ: ಭಾನುವಾರ ಬೀಸಿದ ಬಿರುಗಾಳಿಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ದಾರುಲ್ ಇರ್ಶಾದಿಯ ಎಜುಕೇಶನ್ ಸೆಂಟರ್ ಮುಂಭಾಗದ ಎರಡು ಬೃಹತ್ ಗಾತ್ರ ಮರಗಳು ರಸ್ತೆಗೆ ಉರುಳಿ ಬಿದ್ದವು. ಇದರಿಂದ ಮೂರು ತಾಸಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು. ಏಳು ವಿದ್ಯುತ್ ಕಂಬಗಳು ಹಾನಿಗೊಂಡಿವೆ.

ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಬೀಸಿದ ಬಿರುಗಾಳಿಗೆ ರಸ್ತೆ ಬದಿಯ ಸುಮಾರು 50 ವರ್ಷಗಳಷ್ಟು ಹಳೆಯ ಎರಡು ದೂಪದ ಮರಗಳು ರಸ್ತೆಗೆ ಬಿದ್ದವು. ಮರಗಳು ಬೀಳುವ ಸಂದರ್ಭ ಅವುಗಳು ವಿದ್ಯುತ್ ತಂತಿ ಮೇಲಿಂದ ಉರುಳಿದ ಪರಿಣಾಮ ಅದರ ಜತೆಗೆ ಏಳು ವಿದ್ಯುತ್ ಕಂಬಗಳು ನೆಲಸಮವಾದವು. ರಸ್ತೆಯಲ್ಲಿ ಮರದ ತುಂಡುಗಳು ಅಡ್ಡಾದಿಡ್ಡಿಯಾಗಿ ಬಿದ್ದುದರಿಂದ ಕಾರ್ಯಾಚರಣೆಗೆ ಮತ್ತಷ್ಟು ತೊಂದರೆಯಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಂಗಳೂರು- ಬೆಂಗಳೂರು, ಮಂಗಳೂರು-ಪುತ್ತೂರು ರಸ್ತೆಯ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಮಾಣಿ ಪರಿಸರದ ಹಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತು. ಸುಮಾರು ಮೂರು ತಾಸು ವಾಹನಗಳು ಸಾಲು ಸಾಲಾಗಿ ರಸ್ತೆಗಳಲ್ಲೇ ನಿಲ್ಲಬೇಕಾಯಿತು. ಇದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಸಂಜೆ 5ರ ಬಳಿಕ ವಾಹನ ಸಂಚಾರ ಆರಂಭಗೊಂಡಿತು.

ಘಟನೆ ಬಗ್ಗೆ ಸ್ಪಂದಿಸಿದ ಸಾರ್ವಜನಿಕರು ತಾತ್ಕಾಲಿಕವಾಗಿ ಮರಗಳನ್ನು ತೆರವುಗೊಳಿಸಿದರು. ಇನ್ನಷ್ಟು ಮರದ ತುಂಡುಗಳು ರಸ್ತೆ ಬದಿಯಲ್ಲೇ ಬಿದ್ದಿದ್ದವು. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು, ಮೆಸ್ಕಾಂ ಅಧಿಕಾರಿಗಳು, ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾಣಿ ಪರಿಸರ ಸೇರಿದಂತೆ ಈ ವರ್ಷದ ಮಳೆಗಾಲದಲ್ಲಿ ಇಂಥ ಗಾಳಿ ಇದಕ್ಕಿಂತ ಮೊದಲು ಬಂದಿಲ್ಲ. ಈ ಬಿರುಗಾಳಿಗೆ ಎರಡು ಮರಗಳು ಮಾತ್ರ ಬಿದ್ದಿಲ್ಲ; ಮಾಣಿ ಸುತ್ತಮುತ್ತಲಿನ ಹಲವು ಮನೆಗಳ ಮುಂಭಾಗದಲ್ಲಿದ್ದ ಮರಗಳೂ ನೆಲಕ್ಕುರುಳಿವೆ. ವಿದ್ಯುತ್ ಕಂಬಗಳಿಗೂ ಭಾರೀ ಹಾನಿ ಸಂಭವಿಸಿದೆ. ಗಾಳಿ ಸುಮಾರು ಅರ್ಧ ಗಂಟೆ  ಬೀಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.