ADVERTISEMENT

150 ನೇ ಪ್ಲಾಸ್ಲಾ ದಾನ: ದಾನಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 2:55 IST
Last Updated 10 ಅಕ್ಟೋಬರ್ 2020, 2:55 IST
ಪ್ಲಾಸ್ಮಾ ದಾನಿಗಳ ಸನ್ಮಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ ಮಾತನಾಡಿದರು.
ಪ್ಲಾಸ್ಮಾ ದಾನಿಗಳ ಸನ್ಮಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ ಮಾತನಾಡಿದರು.   

ಮಂಗಳೂರು: ಕೋವಿಡ್–19 ಸಂದರ್ಭದಲ್ಲಿ ರಕ್ತ ದಾನದ ಮೂಲಕ ಜನರ ಜೀವ ಉಳಿಸುತ್ತಿರುವ ವೆಲ್‌ನೆಸ್ ಹೆಲ್ಪ್‌ಲೈನ್ ಸಂಘಟನೆಗೆ ಅಭಿನಂದನೆಗಳು. ನಾನು ಈ ಸಂಘಟನೆಯ ಒಬ್ಬ ಫಲಾನುಭವಿ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದರು.

ನಗರದ ಅತ್ತಾವರ ಹಿದಾಯ ಫೌಂಡೇಶನ್ ಕಚೇರಿಯ ಆವರಣದಲ್ಲಿ ಶುಕ್ರವಾರ ವೆಲ್‌ನೆಸ್ ಹೆಲ್ಪ್‌ಲೈನ್ ವತಿಯಿಂದ 150ನೇ ಪ್ಲಾಸ್ಮಾ ದಾನದ ಮೂಲಕ ಮಾನವೀಯತೆ ಮೆರೆದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನ ಬಾವ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ರಕ್ತದ ಅಗತ್ಯ ಇತ್ತು. ಆ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರನ್ನು ಸಂಪರ್ಕಿಸಿದಾಗ ವೆಲ್‌ನೆಸ್ ಹೆಲ್ಪ್‌ಲೈನ್ ಸಂಘಟನೆಯ ಬಗ್ಗೆ ತಿಳಿಸಿದರು. ಈ ವೇಳೆ ಅವರನ್ನು ಸಂಪರ್ಕಿಸಿದಾಗ ತಕ್ಷಣ ಸಂಘಟನೆಯ ಇಬ್ಬರು ಯುವಕರು ಬಂದು ಪ್ಲಾಸ್ಮಾ ದಾನ ಮಾಡಿ ಸಹಾಯ ಮಾಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಪ್ಲಾಸ್ಮಾ ದಾನಿಗಳನ್ನು ಅಭಿನಂದಿಸಿದರು.

ADVERTISEMENT

ಸಮಾಜದ ಎಲ್ಲ ಜನ ಸಮುದಾಯವನ್ನು ಸಂಕಷ್ಟಕ್ಕೀಡು ಮಾಡಿರುವ ಕೋವಿಡ್–19 ಎದುರಿಸಲು ಸಾಮೂಹಿಕ ಪ್ರಯತ್ನ ಅಗತ್ಯ ಎಂದರು.

ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸದಾಶಿವ ಶ್ಯಾನ್‌ಭೋಗ್, ಡಾ.ತಾಜುದ್ದೀನ್, ಡಾ.ಜನಾರ್ದನ ಕಾಮತ್, ಡಾ.ಪ್ರಿಯಾ ಬಲ್ಲಾಳ್, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾ. ಗಿರಿಧರ್ ಉಪಸ್ಥಿತರಿದ್ದರು. ಹಿದಾಯ ಫೌಂಡೇಶನ್ ನ ಅಧ್ಯಕ್ಷ ಮನ್ಸೂರ್ ಅಝಾದ್ ಅಧ್ಯಕ್ಷತೆ ವಹಿಸಿದ್ದರು.

150ಕ್ಕೂ ಅಧಿಕ ಪ್ಲಾಸ್ಮಾ ದಾನಿಗಳನ್ನು ಅಭಿನಂದಿಸಲಾಯಿತು. ವೆಲ್‌ನೆಸ್ ಹೆಲ್ಪ್‌ಲೈನ್ ಸಂಘಟನೆಯ ಸಂಚಾಲಕ ಖಾಸಿಂ ಅಹ್ಮದ್ ದಿಕ್ಸೂಚಿ ಭಾಷಣ ಮಾಡಿದರು. ಸಲೀಂ ಕಿರಾಅತ್ ಪಠಿಸಿದರು. ರಫೀಕ್ ಮಾಸ್ಟರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.