ಮಂಗಳೂರು: ಜಿಲ್ಲೆಯಲ್ಲಿ ಶುಕ್ರವಾರ 456 ಜನರಿಗೆ ಕೋವಿಡ್–19 ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20 ಸಾವಿರ ಗಡಿಯತ್ತ ಸಾಗಿದೆ. ಶುಕ್ರವಾರ 340 ಮಂದಿ ಗುಣಮುಖರಾಗಿದ್ದು, ಮೃತಪಟ್ಟಿರುವ 11 ಜನರಿಗೆ ಕೋವಿಡ್–19 ಇರುವುದು ಖಚಿತವಾಗಿದೆ.
ಜಿಲ್ಲೆಯ ದೃಢವಾಗಿರುವ ಪ್ರಕರಣಗಳ ಪೈಕಿ 131 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ. 236 ಮಂದಿಗೆ ಶೀತ ಜ್ವರ ಲಕ್ಷಣದಿಂದ, 14 ಮಂದಿಗೆ ತೀವ್ರ ಉಸಿರಾಟದ ತೊಂದರೆಯಿಂದ ಕೋವಿಡ್–19 ಪತ್ತೆಯಾಗಿದ್ದು, 75 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ.
ಮಂಗಳೂರು ತಾಲ್ಲೂಕಿನ 242, ಬಂಟ್ವಾಳ 86, ಪುತ್ತೂರು 27, ಸುಳ್ಯ 26, ಬೆಳ್ತಂಗಡಿ 40 ಹಾಗೂ ಬೇರೆ ಜಿಲ್ಲೆಯ 35 ಜನರಲ್ಲಿ ಕೋವಿಡ್ ದೃಢವಾಗಿದೆ. ಈ ಪೈಕಿ 168 ಪುರುಷರು ಹಾಗೂ 96 ಮಹಿಳೆಯರು ಸೇರಿದಂತೆ 264 ಜನರಲ್ಲಿ ರೋಗ ಲಕ್ಷಣಗಳು ಪತ್ತೆಯಾಗಿವೆ. 102 ಪುರುಷರು, 90 ಮಹಿಳೆಯರು ಸೇರಿದಂತೆ 192 ಜನರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್–19 ದೃಢ ಪಟ್ಟು ಚಿಕಿತ್ಸೆ ಪಡೆಯುತ್ತಿದ್ದ 340 ಮಂದಿ ಶುಕ್ರವಾರ ಗುಣಮುಖರಾಗಿದ್ದಾರೆ.
ಕೋವಿಡ್ ಕೇರ್ ಸೆಂಟರ್ಗಳಲ್ಲಿದ್ದ 6, ಹೋಂ ಐಸೋಲೇಷನ್ನಲ್ಲಿದ್ದ 308 ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ಜನರ ಗಂಟಲು ದ್ರವದ ಮಾದರಿ ವರದಿ ನೆಗೆಟಿವ್ ಬಂದಿದೆ.
ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಜನರು ಮೃತಪಟ್ಟಿದ್ದು, ಅವರಿಗೆ ಕೋವಿಡ್–19 ಇರುವುದು ದೃಢವಾಗಿದೆ. ಮಂಗಳೂರು ತಾಲ್ಲೂಕಿನ 6, ಬಂಟ್ವಾಳ, ಪುತ್ತೂರು, ಸುಳ್ಯ ತಾಲ್ಲೂಕಿನ ತಲಾ ಒಬ್ಬರು ಹಾಗೂ ಬೇರೆ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ.
ಕಾಸರಗೋಡು: 145 ಮಂದಿಗೆ ಸೋಂಕು
ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 142 ಜನರಿಗೆ ಕೋವಿಡ್–19 ದೃಢವಾಗಿದೆ. ಈ ಪೈಕಿ 122 ಜನರಿಗೆ ಸಂಪರ್ಕದಿಂದ ಸೋಂಕು ತಗಲಿದೆ.
110 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ 13 ರಂದು ಮೃತಪಟ್ಟ 79 ವರ್ಷದ ವ್ಯಕ್ತಿಗೆ ಕೋವಿಡ್–19 ಇರುವುದು ಶುಕ್ರವಾರ ದೃಢವಾಗಿದೆ. ಜಿಲ್ಲೆಯಲ್ಲಿ 1,957 ಸಕ್ರಿಯ ಪ್ರಕರಣಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.