ADVERTISEMENT

ಮಂಗಳೂರು: ನಾಗರಿಕರ ಕುಂದುಕೊರತೆ ಪ‍ರಿಹಾರಕ್ಕೆ ಎಎಪಿ ಪೋರ್ಟಲ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 11:41 IST
Last Updated 29 ಸೆಪ್ಟೆಂಬರ್ 2022, 11:41 IST
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ ಮಾತನಾಡಿದರು. ಸಿವಿಲ್ ಎಂಜಿನಿಯರ್‌ ರವಿಪ್ರಸಾದ್‌, ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕಾಮತ್, ಜಿಲ್ಲಾ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಸಂಘಟಕ ವೆಂಕಟೇಶ್ ಬಾಳಿಗಾ ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ಬೆನೆಟ್ ನವಿತಾ ಮೊರಾಸ್ ಇದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ ಮಾತನಾಡಿದರು. ಸಿವಿಲ್ ಎಂಜಿನಿಯರ್‌ ರವಿಪ್ರಸಾದ್‌, ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕಾಮತ್, ಜಿಲ್ಲಾ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಸಂಘಟಕ ವೆಂಕಟೇಶ್ ಬಾಳಿಗಾ ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ಬೆನೆಟ್ ನವಿತಾ ಮೊರಾಸ್ ಇದ್ದಾರೆ   

ಮಂಗಳೂರು: ನಗರದ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿ ನಾಗರಿಕರು ಮತ್ತು ಆಡಳಿತದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಆಮ್ ಆದ್ಮಿ ಪಾರ್ಟಿ (ಎಎಪಿ) ಪೋರ್ಟಲ್ ಆರಂಭಿಸಲಿದೆ.

ನಗರದ ಬಿಜೈ ಚರ್ಚ್ ಸಭಾಂಗಣದಲ್ಲಿ ಅಕ್ಟೋಬರ್ 2ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎಫ್‌. ಸಲ್ದಾನ ಅವರು ಪೋರ್ಟಲ್ ಬಿಡುಗಡೆ ಮಾಡುವರು ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕಾಮತ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ‍ಪೋರ್ಟಲ್ ಸೀಮಿತವಾಗಿರುತ್ತದೆ. ವೈಯಕ್ತಿಕ ಸಮಸ್ಯೆಗಳನ್ನು ಪರಿಗಣಿಸಲಾಗುವುದಿಲ್ಲ. ಜನರು ಅನುಭವಿಸುವ ತೊಂದರೆಯನ್ನು ಬರೆದು ಚಿತ್ರ ಅಥವಾ ವಿಡಿಯೊ ಲಗತ್ತಿಸಿ ಕಳುಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಪರಿಹಾರ ಸಿಗದೇ ಇದ್ದರೆ ಮತ್ತೆ ಮತ್ತೆ ಒತ್ತಾಯಿಸಲಾಗುವುದು. ಆಗಲೂ ಸುಮ್ಮನೇ ಇದ್ದರೆ ಪ್ರತಿಭಟನೆ ಮಾಡಲಾಗುವುದು’ ಎಂದು ಸಂತೋಷ್ ಕಾಮತ್ ತಿಳಿಸಿದರು.

ADVERTISEMENT

‘ಪಕ್ಷವು ಸ್ವರಾಜ್ಯ ಮಾದರಿ ಆಡಳಿತದಲ್ಲಿ ನಂಬಿಕೆ ಇರಿಸಿಕೊಂಡಿದೆ. ಆಡಳಿತವನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವ ಬದ್ಧತೆಯನ್ನು ಸೂಚಿಸಲು ಗಾಂಧಿ ಜಯಂತಿ ದಿನದಂದೇ ಪೋರ್ಟಲ್ ಆರಂಭಿಸಲು ತೀರ್ಮಾನಿಸಲಾಗಿದೆ. ಆಡಳಿತಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಇಂಥ ಪ್ರಯತ್ನಗಳ ಅಗತ್ಯವಿರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪೋರ್ಟಲ್‌ನ ರೂವಾರಿ, ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ಬೆನೆಟ್ ನವಿತಾ ಮೊರಾಸ್, ಜಿಲ್ಲಾ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಸಂಘಟಕ ವೆಂಕಟೇಶ್ ಬಾಳಿಗಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.