ADVERTISEMENT

ಅಬ್ದುಲ್ ಹತ್ಯೆ | ಭುಗಿಲೆದ್ದ ಆಕ್ರೋಶ: ಫರಂಗಿಪೇಟೆ, ಬಿ.ಸಿ.ರೋಡ್ ಅಘೋಷಿತ ಬಂದ್‌

​ಪ್ರಜಾವಾಣಿ ವಾರ್ತೆ
Published 28 ಮೇ 2025, 23:30 IST
Last Updated 28 ಮೇ 2025, 23:30 IST
<div class="paragraphs"><p>ಅಬ್ದುಲ್ ರಹೀಂ ಅಂತಿಮ ಯಾತ್ರೆ ಬಿ.ಸಿ.ರೋಡ್‌ನಲ್ಲಿ ಸಾಗುವಾಗ ಸೇರಿದ್ದ ಜನಸ್ತೋಮ </p></div>

ಅಬ್ದುಲ್ ರಹೀಂ ಅಂತಿಮ ಯಾತ್ರೆ ಬಿ.ಸಿ.ರೋಡ್‌ನಲ್ಲಿ ಸಾಗುವಾಗ ಸೇರಿದ್ದ ಜನಸ್ತೋಮ

   

ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್ 

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಇರಾ ಕೋಡಿ ಎಂಬಲ್ಲಿ ಹತ್ಯೆಗೊಳಾದ ಕೊಳತ್ತಮಜಲುವಿನ ಅಬ್ದುಲ್ ರಹಿಮಾನ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಅಂತಿಮ ಯಾತ್ರೆಯು ಸಾಗಿದ ಮಾರ್ಗದ ಉದ್ದಕ್ಕೂ ಅಂಗಡಿಗಳು ಮುಚ್ಚಿದ್ದು, ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು. 

ADVERTISEMENT

ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಅಬ್ದುಲ್ ರಹಿಮಾನ್ ಮೃತದೇಹವನ್ನು ಕುತ್ತಾರು ಮದನಿ ನಗರದ ಜುಮಾ ಮಸೀದಿಗೆ ತರಲಾಯಿತು. ಅಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬಂಟ್ವಾಳ ತಾಲ್ಲೂಕಿನ ಕುರಿಯಾಳ ಗ್ರಾಮದ ಕೊಳತ್ತಮಜಲಿಗೆ ಆಂಬುಲೆನ್ಸ್‌ನಲ್ಲಿ ಒಯ್ಯಲಾಯಿತು. 

ಉಳ್ಳಾಲ ತಾಲ್ಲೂಕಿನ ಕುತ್ತಾರಿನಿಂದ ಆರಂಭವಾಗಿ ಕೊಳತ್ತಮಜಲುವರೆಗೆ ಅಂತಿಮಯಾತ್ರೆ ನಡೆಯಿತು. ಈ ಮಾರ್ಗದ ಎಲ್ಲ ಪಟ್ಟಣಗಳಲ್ಲಿ ಅಂಗಡಿಗಳು ಮಧ್ಯಾಹ್ನದವರೆಗೆ ಬಂದ್ ಆಗಿದ್ದವು. ಮಾರ್ಗದ ಉದ್ದಕ್ಕೂ ‘ಶಹೀದ್ ಅಸ್ಸಲಾಂ’ ಘೋಷಣೆ ಮುಗಿಲು ಮುಟ್ಟಿತ್ತು. ಅಂತಿಮಯಾತ್ರೆ ಸಾಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಮತ್ತು ಮಂಗಳೂರು ನಡುವೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. 

ಬಿ.ಸಿ.ರೋಡ್‌ನ ಮಿತ್ತಬೈಲ್‌ ಜುಮ್ಮಾ ಮಸೀದಿ ಬಳಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಲ್ಲೂ ಬಹುತೇಕ ಅಂಗಡಿ ಮಳಿಗೆಗಳು ಮುಚ್ಚಿದ್ದವು. ತೆರೆದಿದ್ದ ಕೆಲವು ಮಳಿಗೆಗಳನ್ನು ಕೆಲವು  ಯುವಕರು ಬಲವಂತದಿಂದ ಮುಚ್ಚಿಸಿದರು. 

ಅಂತಿಮ ನಮನ:
ಅಂತಿಮ ಯಾತ್ರೆ ಸಾಗಿದ ಮಾರ್ಗದಲ್ಲಿನ ಮಸೀದಿಗಳ ಬಳಿ ಅಲ್ಲಲ್ಲಿ ಸೇರಿದ್ದ ಜನರು ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು. ಪಾರ್ಥಿವ ಶರೀರ ಫರಂಗಿಪೇಟೆಯ ತಲುಪುವಾಗ ಅಲ್ಲಿನ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಸ್ಥಳದಲ್ಲಿ ಸೇರಿದ್ದ ಆಕ್ರೋಶಿತರ ಗುಂಪೊಂದು ಕೆಲಕಾಲ ರಸ್ತೆ ತಡೆ ನಡೆಸಿತು. ಅವರನ್ನು  ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು.

ಕೆಲ ಸಿಟಿ ಬಸ್‌ ಸಂಚಾರ ಸ್ಥಗಿತ:

ಮಂಗಳೂರು ಹಾಗೂ ಬಿ.ಸಿ. ರೋಡ್‌ನಲ್ಲಿ ಕೆಲವು ಸಿಟಿಬಸ್‌ಗಳು ಬುಧವಾರ ಬೆಳಿಗ್ಗೆ  ಸಂಚಾರ ಸ್ಥಗಿತಗೊಳಿಸಿದವು. ಇದರಿಂದಾಗಿ ವಿದ್ಯಾರ್ಥಿಗಳು, ಕಚೇರಿಗೆ ತೆರಳುವವರು ಸಮಸ್ಯೆ ಎದುರಿಸಿದರು.

ಬಸ್‌ಗೆ ಕಲ್ಲು:  ಮಂಗಳೂರಿನಿಂದ ಕಟೀಲಿಗೆ ಸಂಚರಿಸುವ ನಂದಿನಿ ಬಸ್‌ಗೆ ಸುರತ್ಕಲ್‌ನಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.  ಆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಬೇರೆ ಬಸ್‌ನಲ್ಲಿ ತೆರಳಿದರು. ಈ ಘಟನೆ ಬಳಿಕ ಕೆಲವರು ಅಂಗಡಿ ಮುಚ್ಚಿದರು. 

ಅಬ್ದುಲ್ ರಹಿಮಾನ್ 

ಕೊಳತ್ತಮಜಲಿನಲ್ಲಿ ಅಂತ್ಯಕ್ರಿಯೆ

ಬಂಟ್ವಾಳ (ದಕ್ಷಿಣಕನ್ನಡ): ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಅವರ ಅಂತ್ಯಕ್ರಿಯೆ ಅವರ ಊರು ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲುವಿನಲ್ಲಿ ಬುಧವಾರ ನೆರವೇರಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಅವರ ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರವನ್ನು ಅಬ್ದುಲ್ ರಹಿಮಾನ್ ಮನೆಗೆ ಒಯ್ಯಲಾಯಿತು. ಅವರ ತಂದೆ ಅಬ್ದುಲ್ ಖಾದರ್, ತಾಯಿ ಐಸಮ್ಮ, ಪತ್ನಿ ಫಾತಿಮತ್ ನುಸ್ರಾ, ಮಕ್ಕಳು  ಹಾಗೂ ಬಂಧುಗಳು ಅಂತಿಮ ದರ್ಶನ ಪಡೆದರು.  ಪಾರ್ಥಿವ ಶರೀರವನ್ನು ಮನೆಗೆ ತರುತ್ತಿದ್ದಂತೆಯೇ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಸ್ಥಳೀಯ  ಜುಮ್ಮಾ ಮಸೀದಿಯಲ್ಲಿ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿ ಅಂತಿಮ ವಿಧಿಗಳನ್ನು ನೆರವೇರಿಸಿದರು.  ಸ್ಥಳೀಯ ಜುಮ್ಮಾ ಮಸೀದಿಯಲ್ಲಿ ಮಯ್ಯತ್ ನಮಾಜ್‌ ನೆರವೇರಿಸಲಾಯಿತು. ಅಂತಿಮ ಪ್ರಾರ್ಥನೆ ಸಲ್ಲಿಕೆ ಬಳಿಕ ಸ್ಥಳೀಯ ಸ್ಮಶಾನದಲ್ಲಿ ಅವರನ್ನು ದಫನ ಮಾಡಲಾಯಿತು. ಮಸೀದಿ ಅಧ್ಯಕ್ಷ ಅಬ್ದುಲ್ ಅಜೀಜ್, ಮುಖಂಡ ಸಬೂಕ್ ದಾರಿಮಿ, ಕಾಂಗ್ರೆಸ್ ಮುಖಂಡ ಅಶ್ರಫ್ ಕೆ., ಎಸ್‌ಡಿಪಿಐ ಮುಖಂಡ ಅಥಾವುಲ್ಲ ಜೋಕಟ್ಟೆ ಹಾಗೂ ಜಿಲ್ಲೆಯ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದರು.

ಅಬ್ದುಲ್ ರಹಿಮಾನ್ ಅವರ ಪಾರ್ಥಿವ ಶರೀರ ಬಂಟ್ವಾಳ ತಾಲ್ಲೂಕಿನ  ಬಡಗಬೆಳ್ಳೂರು ಗ್ರಾಮದ  ಕೊಳತ್ತಮಜಲಿನಲ್ಲಿರುವ ಅವರ ಮನೆಗೆ ತಲುಪಿದಾಗ ಸೇರಿದ್ದ ಜನರು         
ಕಾಂಗ್ರೆಸ್‌ಗೆ ಸಾಮೂಹಿಕ ರಾಜೀನಾಮೆ? 
ಜಿಲ್ಲೆಯಲ್ಲಿ ಕೋಮು ಆಧರಿತ ಹತ್ಯೆಗಳಿಗೆ ಕಡಿವಾಣ ಹಾಕಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ. ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ‘ಜಿಲ್ಲೆಯಲ್ಲಿ ಧರ್ಮಾಧಾರಿತವಾಗಿ ನಡೆಯುತ್ತಿರುವ ಸರಣಿ ಹತ್ಯೆಗಳನ್ನು ತಡೆಯಲು ಗೃಹ ಇಲಾಖೆ ವಿಫಲವಾಗಿದೆ. ಪ್ರಚೋದನಕಾರಿ ಭಾಷಣ ಮಾಡಿ ಧರ್ಮಗಳ ನಡುವೆ ಗಲಭೆ ಸೃಷ್ಟಿಸುವವರ ವಿರುದ್ಧ ಕ್ರಮವಹಿಸಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು. ‘ಬಂದ್‌ಗೆ ಕರೆ ನೀಡಿ ಸಾರ್ವಜನಿಕ  ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾದವರ ವಿರುದ್ಧವೂ ಕ್ರಮ ಆಗುತ್ತಿಲ್ಲ. ಇದರಿಂದ ಬೇಸತ್ತು ಬೂತ್‌ ಮಟ್ಟದಿಂದ ರಾಜ್ಯಮಟ್ಟದವರೆಗೆ ವಿವಿಧ ಹುದ್ದೆಗಳಲ್ಲಿರುವ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದೇವೆ’ ಎಂದು ಶಾಹುಲ್ ಹಮೀದ್ ‘ಪ್ರಜಾವಾಣಿ’ಗೆ ತಿಳಿಸಿದರು. ಪಕ್ಷದ ಸ್ಥಳೀಯ ಘಟಕಗಳ ಪ್ರಮುಖರು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. 

ಆರೋಪಿಗಳ ಬಂಧನಕ್ಕೆ ಕುಟುಂಬದ ಆಗ್ರಹ

ಅಬ್ದುಲ್ ರಹಿಮಾನ್ ಹತ್ಯೆಯಿಂದ ನೋವಿಗೊಳಗಾದ ಕುಟುಂಬದವರು ಈ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ‘ಊರಿವರೊಂದಿಗೆ ಅನ್ಯೋನ್ಯವಾಗಿ ಇದ್ದ ಮಗ ಮನೆಗೂ ಆಧಾರಸ್ತಂಭವಾಗಿದ್ದ. ಅವನನ್ನು ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮೃತ ವ್ಯಕ್ತಿಯ ತಂದೆ ಅಬ್ದುಲ್ ಖಾದರ್ ಒತ್ತಾಯಿಸಿದರು.

‘ನನ್ನ ಸೋದರ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು (ಮೂರೂವರೆ ವರ್ಷದ ಮಗಳು ಫಾತಿಮತ್ ನಶ್ವಾ ಹಾಗೂ ಒಂದೂವರೆ ವರ್ಷದ ಮಗ ಮೊಹಮ್ಮದ್‌ ನಶೀಫ್‌) ಹೊಂದಿದ್ದ. ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದ. ಅಮಾಯಕ ಸಹೋದರನನ್ನು ಹತ್ಯೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷಯಾಗಬೇಕು’ ಎಂದು ಮೃತರ ಸಹೋದರಿ ಶಬಾನಾ ಆಗ್ರಹಿಸಿದರು.

ಮೂವರು ಆರೋಪಿಗಳು ವಶಕ್ಕೆ?
ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ಕಲಂದರ್ ಶಾಫಿ ಮೇಲಿನ ಹಲ್ಲೆ ಬಗ್ಗೆ ಮಹಮ್ಮದ್ ನಿಸಾರ್ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೀಪಕ್‌, ಸುಮಿತ್ ಸೇರಿ 15 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಸಂಬಂಧ ದೀಪಕ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳನ್ನೆಲ್ಲ ಶೀಘ್ರವೇ ಬಂಧಿಸುತ್ತೇವೆ’ ಎಂದು ಎಡಿಜಿಪಿ (ಕಾನೂನು ಸುವ್ಯವಸ್ಥೆ) ಆರ್.ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.ಈ ಸಲುವಾಗಿ ಪೊಲೀಸರ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್‌. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.