ಮಂಗಳೂರು: ಮಂಗಳೂರು ಮತ್ತು ಅಬುಧಾಬಿ ನಡುವಿನ ವಿಮಾನಯಾನ ದುಬಾರಿಯಾಗುತ್ತಿರುವ ಕಾರಣ, ಈ ಭಾಗದ ಅನಿವಾಸಿ ಕನ್ನಡಿಗರು ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾದ ನೆರೆಯ ಕೇರಳ ರಾಜ್ಯದ ವಿಮಾನ ನಿಲ್ದಾಣಗಳನ್ನು ಅವಲಂಬಿಸಿದ್ದಾರೆ.
ಅಬುಧಾಬಿಯಿಂದ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಯಾನದ ದರ ವ್ಯತ್ಯಾಸ ವಿಪರೀತವಾಗಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಅಬುಧಾಬಿಯಿಂದ ಕಣ್ಣೂರಿಗೆ 390 ದಿರ್ಹಂ (₹ 8,190) ದರ ಇದ್ದರೆ, ಮಂಗಳೂರಿಗೆ 750 ದಿರ್ಹಂ (₹ 15,790) ದರ ಇದೆ.ಅಬುಧಾಬಿಗೆ ಮಂಗಳೂರಿನಿಂದ ನೇರವಾಗಿ ಸದ್ಯ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಮಾತ್ರ ಹಾರಾಟ ಮಾಡುತ್ತದೆ.
‘ವಿಮಾನಯಾನದ ದರ ಹೆಚ್ಚಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಹೊರೆಯಾಗಿದೆ. ಹೀಗಾಗಿ, ಅಬುಧಾಬಿಯಿಂದ ಬರುವವರು ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ರಸ್ತೆ ಅಥವಾ ರೈಲ್ವೆ ಮೂಲಕ ಮಂಗಳೂರು, ಉಡುಪಿ ತಲುಪುತ್ತಿದ್ದಾರೆ’ ಎನ್ನುತ್ತಾರೆ ಅಬುಧಾಬಿಯಲ್ಲಿ ಉದ್ಯಮ ಹೊಂದಿರುವ ಮಣಿಪಾಲದ ಸರ್ವೋತ್ತಮ ಶೆಟ್ಟಿ.
‘ಕೇರಳದ ಜನಪ್ರತಿನಿಧಿಗಳ ಪ್ರಯತ್ನದಿಂದ ಅಲ್ಲಿನ ವಿಮಾನಯಾನ ವೆಚ್ಚ ಕಡಿಮೆ ಇದೆ. ಕರ್ನಾಟಕದಲ್ಲಿ ಎನ್ಆರ್ಐಗಳ ಧ್ವನಿಯಾಗಿರುವ ಎನ್ಆರ್ಐ ಫೋರಂ ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ನೇಮಕವಾಗಿಲ್ಲ’ ಎಂಬುದು ಅವರ ಆಕ್ಷೇಪ.
‘ಇಲ್ಲಿಯ ತನಕ ಯಾರೂ ಈ ವಿಷಯವನ್ನು ನನ್ನ ಗಮನಕ್ಕೆ ತರಲಿಲ್ಲ. ಈ ಬಗ್ಗೆ ಪೂರಕ ದಾಖಲೆಗಳನ್ನು ಒದಗಿಸಿದರೆ, ಸರ್ಕಾರದ ಗಮನ ಸೆಳೆದು, ಜನರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಶಾಸಕ ವೇದವ್ಯಾಸ ಕಾಮತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ವಿಮಾನಯಾನ ದರ:
ಅಬುಧಾಬಿ–ಕಣ್ಣೂರು: 450 ದಿರ್ಹಂ (ಆ.13), 390 ದಿರ್ಹಂ (ಆ.15), 390 ದಿರ್ಹಂ (ಆ.17)
ಅಬುಧಾಬಿ–ಮಂಗಳೂರು: 987.27 ದಿರ್ಹಂ (ಆ.14), 867.89 ದಿರ್ಹಂ (ಆ.17)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.