ADVERTISEMENT

ಸುರತ್ಕಲ್| ಕಾರು ಅಪಘಾತ; ಪ್ರಯಾಣಿಕರು ಪಾರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 11:22 IST
Last Updated 4 ಜೂನ್ 2023, 11:22 IST
ಸಂಪೂರ್ಣ ನಜ್ಜುಗುಜ್ಜಾದ ಕಾರು
ಸಂಪೂರ್ಣ ನಜ್ಜುಗುಜ್ಜಾದ ಕಾರು   

ಸುರತ್ಕಲ್: ಇಲ್ಲಿನ ತಡಂಬೈಲ್‌ನಲ್ಲಿ ಭಾನುವಾರ ಮುಂಜಾನೆ ನಡೆದ ಅಪಘಾತದಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ: ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಪಕ್ಕದ ಸರ್ವಿಸ್ ರಸ್ತೆ ಬಳಿಯ ಮನೆಯ ಕಟ್ಟಡಕ್ಕೆ ಡಿಕ್ಕಿಯಾಗಿದೆ.

ಕಾರಿನಲ್ಲಿ ಇಬ್ಬರು ಯುವಕರು ಮತ್ತು ಯುವತಿ ಪ್ರಯಾಣಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಬಳಿ ಹೊರಗಡೆ ಮಲಗಿದ್ದ ಇಬ್ಬರು ಕೂಲಿಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ADVERTISEMENT

ಅಪಘಾತದ ರಭಸಕ್ಕೆ ರಸ್ತೆ ಸಮೀಪದ ವೆಂಕಟರಮಣ ರಾವ್ ಅವರ ಕಟ್ಟಡಕ್ಕೆ ಹಾನಿಯಾಗಿದ್ದು, ಕಟ್ಟಡದ ಶಟರ್, ಚಾವಣಿ ಕುಸಿದಿದ್ದು, ಸುಮಾರು ₹ 2ಲಕ್ಷ ನಷ್ಟವಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಏರ್‌ ಬ್ಯಾಗ್‌ ತೆರೆದುಕೊಂಡಿದ್ದರಿಂದ ಜೀವ ಹಾನಿ ಆಗಿಲ್ಲ.

ಬಜ್ಪೆ ಕೆಂಜಾರು ಬಳಿಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸಾಗುತ್ತಿದ್ದ ವೇಳೆ ಅವಘಡ ನಡೆದಿದೆ.

ಅಪಘಾತ ವಲಯ: ಅಪಘಾತದ ಕುರಿತು ಸುರತ್ಕಲ್ ಆಪದ್ಭಾಂಧವ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ದೇವಾಡಿಗ ಇಡ್ಯಾ ಮಾತನಾಡಿ, ತಡಂಬೈಲ್ ಬಳಿ ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ತಿರುವು ನೀಡಿ ನಿರ್ಮಿಸಿದ್ದರಿಂದ ಅಪಘಾತವಲಯವಾಗಿದೆ. ನಿತ್ಯ ಅಪಘಾತ ನಡೆಯುತ್ತಿದೆ. ತಿರುವು ಫಲಕ, ರಿಫ್ಲೆಕ್ಟರ್ ಅಳವಡಿಸಿ ಮಾಹಿತಿ ನೀಡಬೇಕು. ತಡೆಬೇಲಿ ಸಂಪೂರ್ಣ ತುಂಡಾಗಿದ್ದು, ಪುನರ್ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.