ADVERTISEMENT

ಮಾನವೀಯತೆಯೊಂದಿಗೆ ಸೌಹಾರ್ದ ಸಂಭ್ರಮ: ಅಜಿಲಮೊಗರು 753ನೇ ಮಾಲಿದಾ ಉರುಸ್

ಸಿದ್ದಿಕ್ ನೀರಾಜೆ
Published 8 ಡಿಸೆಂಬರ್ 2025, 7:29 IST
Last Updated 8 ಡಿಸೆಂಬರ್ 2025, 7:29 IST
ಉಪ್ಪಿನಂಗಡಿ ಸಮೀಪ ಅಜಿಲಮೊಗರು ಮಾಲಿದಾ ಉರುಸ್ ಸಮಾರಂಭದಲ್ಲಿ ರಕ್ತದಾನ ಶಿಬಿರ ನಡೆಯಿತು
ಉಪ್ಪಿನಂಗಡಿ ಸಮೀಪ ಅಜಿಲಮೊಗರು ಮಾಲಿದಾ ಉರುಸ್ ಸಮಾರಂಭದಲ್ಲಿ ರಕ್ತದಾನ ಶಿಬಿರ ನಡೆಯಿತು   

ಉಪ್ಪಿನಂಗಡಿ: ಮಸೀದಿ, ಮದ್ರಸ, ದರ್ಗಾಗಳಲ್ಲಿ ನಡೆಯುವ ಉರುಸ್, ಧಾರ್ಮಿಕ ಉಪನ್ಯಾಸ ನಿರ್ದಿಷ್ಟ ಚೌಕಟ್ಟಿನಲ್ಲಿ ನಡೆಯುವುದು ಸಾಮಾನ್ಯ. ಆದರೆ, ಉಪ್ಪಿನಂಗಡಿ ಸಮೀಪದ ಅಜಿಲಮೊಗರಿನ ಉರುಸ್‌ ಇವೆಲ್ಲಕ್ಕಿಂತಲೂ ವಿಭಿನ್ನವಾಗಿ. ಸೌಹಾರ್ದ ಮೆರೆಯುವುದರ ಜೊತೆಗೆ ರಕ್ತದಾನ ಶಿಬಿರ ನಡೆಸುವ ಮೂಲಕ ಮಾನವೀಯ ಮೌಲ್ಯಗಳಿಗೆ ಒತ್ತುನೀಡುತ್ತಿದೆ.

ಅಜಿಲಮೊಗರು ಜುಮಾ ಮಸೀದಿಯ ಸ್ಥಾಪಕರಾದ ಹಝ್ರತ್ ಸಯ್ಯದ್ ಬಾಬಾ ಫಕ್ರುದ್ದೀನ್ ಔಲಿಯಾ ಅವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಲಾಗುತ್ತಿರುವ ಇತಿಹಾಸ ಪ್ರಸಿದ್ಧ 753ನೇ ಮಾಲಿದಾ ಉರುಸ್‌ನಲ್ಲಿ ಡಿ.5 ಮತ್ತು 6ರಂದು ರಕ್ತದಾನ ಶಿಬಿರವನ್ನು ನಡೆಯಿತು. ಶಿಬಿರದಲ್ಲಿ ಸುಮಾರು 210 ಮಂದಿ ರಕ್ತದಾನ ಮಾಡಿದರು.

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ತಂಡದ ಮೂಲಕ ನಡೆದ ಶಿಬಿರಕ್ಕೆ ಅಜಿಲಮೊಗರು ಮಸೀದಿಯ ಮುದರ್ರಿಸ್ ತ್ವಾಹ ಸಅದಿ ಚಾಲನೆ ನೀಡಿದರು. ಮಸೀದಿ ಉಪಾಧ್ಯಕ್ಷ ಇಬ್ರಾಹಿಂ ಅಜಿಲಮೊಗರು, ಪ್ರಧಾನ ಕಾರ್ಯದರ್ಶಿ ಸಿನಾನ್ ಸಖಾಫಿ, ಆದಂಕುಞಿ ನಡುಮೊಗರು, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ತಂಡದ ಅಧ್ಯಕ್ಷ ನಝೀರ್ ಹುಸೇನ್, ಪದಾಧಿಕಾರಿಗಳಾದ ಸತ್ತಾರ್ ಪುತ್ತೂರು, ಮುಸ್ತಫಾ ಕೆ.ಸಿ.ರೋಡು, ಅಬ್ದುಲ್ ಹಮೀದ್ ಗೋಳ್ತಮಜಲು, ಬಾತಿಷ್ ತೆಕ್ಕಾರು, ಇಮ್ತಿಯಾಜ್ ಬಜಪೆ, ಖಾದರ್ ಮಂಚೂರು, ಸಫ್ವಾನ್ ಕಲಾಯಿ ಭಾಗವಹಿಸಿದ್ದರು.

ADVERTISEMENT

ಬ್ರಿಟೀಷರ ಕಾಲದ ಮಸೀದಿ: ಹಿರಿಯರ ಪ್ರಕಾರ 1225ರಲ್ಲಿ, ಸುಮಾರು 800 ವರ್ಷಗಳ ಹಿಂದೆ ಇರಾನಿನ ಪೂರ್ವಭಾಗದಲ್ಲಿದ್ದ ಸೀಸ್ತಾನ್ ದೇಶದ ರಾಜನಾಗಿದ್ದ ಹಝ್ರತ್ ಸಯ್ಯ‌ದ್ ಬಾಬಾ ಫಕ್ರುದ್ದೀನ್ ಧರ್ಮ ಬೋಧನೆ ಹಾಗೂ ಜನ ಸೇವೆಯ ಹಾದಿಯನ್ನು ಹಿಡಿದು ಇಲ್ಲಿಗೆ ಬಂದಿದ್ದರು. ಇಲ್ಲಿ ಮಸೀದಿ ನಿರ್ಮಿಸಿ ಧರ್ಮ ಕ್ರಾಂತಿಯ ಸಾರಥಿಯಾಗಿ, ಸೂಫಿ ಸಂತರಾಗಿ, ಪವಾಡ ಪುರುಷರಾಗಿ ಹೆಸರು ಪಡೆದಿದ್ದರು. ಅವರ ಸವಿನೆನಪಿಗಾಗಿ ಇಲ್ಲಿ ವರ್ಷಂಪ್ರತಿ ವಿಶೇಷವಾಗಿ ಮಾಲಿದಾ ಹರಕೆ ನಡೆಯುತ್ತಿದ್ದು, ಪ್ರಸಕ್ತ ಈ ವರ್ಷ 753ನೇ ಉರುಸ್ ಆಗಿದೆ.

ಅಕ್ಕಿ ರೊಟ್ಟಿ, ತುಪ್ಪದ ಮಾಲಿದಾ: ಮಾಲಿದಾ ಇಲ್ಲಿನ ವಿಶೇಷ ಪ್ರಸಾದ. ಅಕ್ಕಿಯನ್ನು ಪುಡಿಮಾಡಿ ಒಣ ರೊಟ್ಟಿ ಮಾಡಲಾಗುತ್ತದೆ. ರೊಟ್ಟಿಯನ್ನು ಮತ್ತೆ ಒಣಕೆ ಅಥವಾ ಕಬ್ಬಿಣದ ಚೆಂಡಿನ ಮೂಲಕ ಪುಡಿ ಮಾಡುತ್ತಾರೆ. ಪುಡಿ ಮಾಡುತ್ತಲೇ ಬೆಲ್ಲ ಮತ್ತು ತುಪ್ಪ ಹಾಕಿ ಮಾಲಿದಾ ತಯಾರಿಸಲಾಗುತ್ತದೆ. ಇದನ್ನು ವರ್ಷದಲ್ಲಿ 1 ದಿನ ಮಾತ್ರ ಮಾಡುತ್ತಾರೆ. ಮನೆಯಲ್ಲಿ ಮಾಡುವ ಮಾಲಿದಾದಲ್ಲಿ ಒಂದು ಪಾಲು ಅಜಿಲಮೊಗರು ಮಸೀದಿಗೆ ಅರ್ಪಿಸಲಾಗುತ್ತದೆ.

ಮಾಲಿದಾ ಉರುಸ್ 5 ದಿನ ನಡೆಯುತ್ತದೆ. ಡಿ.2ರಂದು ಜಲಾಲಿಯ್ಯಾ ರಾತೀಬ್‌ನೊಂದಿಗೆ ಉರುಸ್ ಸಮಾರಂಭಕ್ಕೆ ಚಾಲನೆ ನೀಡಲಾಯಿತು. 3ರಂದು ಭಂಡಾರದ ಹರಕೆ ಸಂದಾಯ, 4ರಂದು ಊರ–ಪರವೂರವರ ಕೂಡುವಿಕೆಯಿಂದ ಮಾಲಿದಾ ಹರಕೆ, 5ರಂದು ಮಾಲಿದಾ ವಿತರಣೆ, ಸಾಮೂಹಿಕ ಪ್ರಾರ್ಥನೆ, 6ರಂದು ಸಾಮೂಹಿಕ ಪ್ರಾರ್ಥನೆ, ಕಂದೂರಿ ಊಟ (ಅನ್ನದಾನ) ನಡೆಯಿತು.

ನಿತ್ಯವೂ ಉರುಸ್ ಸಂಭ್ರಮ: ಮಾಲಿದಾ ಹರಕೆ ವರ್ಷದಲ್ಲಿ ಒಂದು ದಿನ ಇದ್ದರೆ, ಇಲ್ಲಿನ ಪಾವಿತ್ರ್ಯದಿಂದಾಗಿ ಪ್ರತಿದಿನ ಸಾವಿರಾರು ಮಂದಿ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಇಲ್ಲಿ ನಿತ್ಯವೂ ಮಧ್ಯಾಹ್ನ ಊಟ ಅಥವಾ ಗಂಜಿಯ ವ್ಯವಸ್ಥೆ ಇರುತ್ತದೆ. 5 ದಿನಗಳ ಉರುಸ್‌ ಸಮಾರಂಭದಲ್ಲಿ ಸುಮಾರು 3 ಲಕ್ಷ ಮಂದಿ ಭಾಗವಹಿಸಿದ್ದಾರೆ. ಶನಿವಾರ ಸುಮಾರು 75 ಸಾವಿರ ಮಂದಿ ಅನ್ನಪ್ರಸಾದ (ಕಂದೂರಿ ಊಟ) ಸ್ವೀಕರಿಸಿದ್ದಾರೆ ಎಂದು ಅಜಿಲಮೊಗರು ಜುಮಾ ಮಸೀದಿ ಉಪಾಧ್ಯಕ್ಷ ಇಬ್ರಾಹಿಂ ಅಜಿಲಮೊಗರು ತಿಳಿಸಿದರು.

ಅಜಿಲಮೊಗರು ಹಿಂದೂಗಳೂ ನಂಬಿಕೆ ಇರಿಸಿರುವ ಪುಣ್ಯಕ್ಷೇತ್ರವಾಗಿದೆ. ನಾವೂ ಮುಸ್ಲಿಮರ ಮೂಲಕ ಮಾಲಿದಾ ಮಾಡಿಸಿ ಹರಕೆ ಸಂದಾಯ ಮಾಡುತ್ತೇವೆ. ನಮ್ಮವರ ಮದುವೆ ದಿಬ್ಬಣ ಹೋಗುವಾಗ ಮಸೀದಿ ಮುಂಭಾಗದಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುವುದು ವಾಡಿಕೆಯಲ್ಲಿದೆ. ಉರುಸ್‌ನಲ್ಲಿ ಹಿಂದೂಗಳೂ ಸ್ವಯಂ ಸೇವಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಇಲ್ಲಿನ ಕಡೇಶಿವಾಲಯ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನದ ಜಾತ್ರೆಗೂ ಇಲ್ಲಿನ ಮುಸ್ಲಿಮರು ಬರುತ್ತಾರೆ, ಸಹಕಾರ ನೀಡುತ್ತಾರೆ ಎಂದು ನೇರಳಕಟ್ಟೆ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಪೂಜಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.