ಮಂಗಳೂರು: ‘ಅಕ್ಷಯ ತೃತೀಯದಂದು ಮಹಿಳೆಯರು ಹಿಂದೂಗಳ ಅಂಗಡಿಯಲ್ಲಿಯೇ ಚಿನ್ನಾಭರಣ ಖರೀದಿ ಮಾಡಬೇಕು, ಮುಸ್ಲಿಮರ ಅಂಗಡಿಗಳಿಂದ ಯಾವಕಾರಣಕ್ಕೂ ಖರೀದಿಸಬಾರದು ಎಂದು ಮಹಿಳಾ ಸಮಿತಿ ಹಾಗೂ ದುರ್ಗಾ ಸೇನೆ ಸಂಘಟನೆಯ ಮಹಿಳೆಯರಿಗೆ ಶ್ರೀರಾಮಸೇನೆ ವತಿಯಿಂದ ಮನವಿ ಸಲ್ಲಿಸಲಾಗುತ್ತಿದೆ’ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ ಖರೀದಿ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಚಿನ್ನ ಕಳ್ಳ ಸಾಗಾಣಿಕೆಯ ಮಾಫಿಯಾ ಹಿಂದೂ ಸಮಾಜಕ್ಕೆ ಮೋಸ ಮಾಡುವ ಹುನ್ನಾರ ನಡೆಸುತ್ತಿದೆ. ಹಿಜಾಬ್ ಘಟನೆಯಿಂದ ಶತ್ರು ಯಾರು ಮಿತ್ರ ಯಾರು ಎಂಬುದನ್ನು ಗುರುತಿಸುವುದು ಸವಾಲಾಗಿ ಪರಿಣಮಿಸಿದೆ.
ಕೇರಳದ ಚಿನ್ನದ ಮಾಫಿಯಾ ಹಿಂದೂ ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಮುಸ್ಲಿಂ ವ್ಯಾಪಾರಿಗಳು ಜಾಹೀರಾತಿನಲ್ಲಿ ಮುಸ್ಲಿಂ ಮಹಿಳೆಯರನ್ನು ಬಳಸಿಕೊಳ್ಳುತ್ತಾರೆ. ಇದರ ಹಿಂದೆ ಹಿಂದೂ ಸಂಸ್ಕೃತಿಯನ್ನು ಅಪಮಾನ ಮಾಡುವ ಹುನ್ನಾರ ಅಡಗಿದೆ. ಕೇರಳ ಸರ್ಕಾರ ಹಾಗೂ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದ ಆರೋಪಿಸಿದರು.
‘ಸರ್ಕಾರದ ಬೆಂಬಲವಿದೆ’
’ಕೇರಳದ ಚಿನ್ನದ ಮಾಫಿಯಾ ಹಿಂದೂ ಸಂಸ್ಕೃತಿಯನ್ನು ಧಮನ ಮಾಡುವ ಕೃತ್ಯಕ್ಕೆ ಬೆಂಬಲವಾಗಿ ನಿಂತಿದೆ. 800ಕ್ಕೂ ಹೆಚ್ಚು ಹಿಂದೂಗಳ ಹತ್ಯೆ ಮಾಡಲಾಗಿದೆ. ಕೇವಲ ಶೇ40 ರಷ್ಟು ಹಿಂದೂಗಳು ಉಳಿದಿದ್ದಾರೆ. ಶೇ 60 ರಷ್ಟು ಹಿಂದೂಗಳು ಮತಾಂತರವಾಗಿದ್ದಾರೆ. ಇದಕ್ಕೆಲ್ಲ ಚಿನ್ನದ ಮಾಫಿಯಾವೇ ನೇರ ಕಾರಣವಾಗಿದೆ. ಕೇರಳದಲ್ಲಿ ಮುಸ್ಲಿಂ, ಕಮ್ಯುನಿಷ್ಟರ ಸರ್ಕಾರ ಇದೆ. ಹಾಗಾಗೀ ಅವರಿಗೆ ಬೆಂಬಲ ಸಿಕ್ಕಿದೆ‘ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.