ಮೂಡುಬಿದಿರೆ (ದಕ್ಷಿಣ ಕನ್ನಡ): ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆ.1, 2ರಂದು ಏರ್ಪಡಿಸಿರುವ 15ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ಉದ್ಯೊಗ ಮೇಳಕ್ಕೆ ವಿದ್ಯಾಗಿರಿ ಆವರಣ ಸಜ್ಜಾಗಿದೆ.
ಈವರೆಗೆ 305 ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸಲಿವೆ. 11,509 ಅಭ್ಯರ್ಥಿಗಳು ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸ್ಥಳದಲ್ಲಿಯೂ ಹೆಸರು ನೋಂದಣಿಗೆ ಅವಕಾಶವಿದೆ.
ಆಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಈ ಬಾರಿ ಎಐ ಆಧಾರಿತ ವಿಶೇಷ ಚಾಟ್ಬಾಟ್ ತಂತ್ರಜ್ಞಾನ ಸಿದ್ಧಪಡಿಸಲಾಗಿದೆ. ವ್ಯಕ್ತಿಗತ ವಿವರ, ಅರ್ಹತೆ ಆಧರಿಸಿ ಅಭ್ಯರ್ಥಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಸೂಕ್ತ ಹುದ್ದೆ, ಕಂಪನಿಗಳ ಮಾಹಿತಿ ಪಡೆಯಬಹುದಾಗಿದೆ. ಜೊತೆಗೆ, ಕಂಪನಿಗಳ ವಿವರಗಳಿರುವ ಕೈಪಿಡಿ, ಅಗತ್ಯವಿರುವವರಿಗೆ ವಸತಿ ವ್ಯವಸ್ಥೆ, ಐಟಿಐ, ಡಿಪ್ಲೊಮಾ ಕಾಲೇಜುಗಳಿಗೆ ವಾಹನ ಸೌಲಭ್ಯ, ಅಭ್ಯರ್ಥಿ ಸಹಾಯವಾಣಿ ಕೇಂದ್ರಗಳು ಇರಲಿವೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬೆಳಿಗ್ಗೆ 9.30ಕ್ಕೆ ಉದ್ಘಾಟಿಸುವರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ, ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.