ADVERTISEMENT

ಪುತ್ತೂರು | ಜಾತ್ರಾಗದ್ದೆಯಲ್ಲಿ 360 ಅಂಗಡಿಗಳಿಗೆ ಅವಕಾಶ: ಪಂಜಿಗುಡ್ಡೆ ಈಶ್ವರ ಭಟ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 5:49 IST
Last Updated 5 ಏಪ್ರಿಲ್ 2025, 5:49 IST
ಏಲಂ ಪ್ರಕ್ರಿಯೆಗೆ ಪಂಜಿಗುಡ್ಡೆ ಈಶ್ವರ ಭಟ್ ಚಾಲನೆ ನೀಡಿದರು
ಏಲಂ ಪ್ರಕ್ರಿಯೆಗೆ ಪಂಜಿಗುಡ್ಡೆ ಈಶ್ವರ ಭಟ್ ಚಾಲನೆ ನೀಡಿದರು   

ಪುತ್ತೂರು: ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವದ ಸಂಬಂಧ ಎಲ್ಲ ವ್ಯಾಪಾರಿಗಳಿಗೂ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ 250 ಅಂಗಡಿಗಳಿದ್ದವು. ಈ ಬಾರಿ 110 ಹೆಚ್ಚುವರಿ ಅಂಗಡಿಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.

ಮಹಾಲಿಂಗೇಶ್ವರ ದೇವಳದ ಜಾತ್ರೋತ್ಸವದ ಅಂಗವಾಗಿ ದೇವಳದ ಸಭಾಭವನದಲ್ಲಿ ನಡೆದ ತಾತ್ಕಾಲಿಕ ಅಂಗಡಿಗಳ ಏಲಂ ಪ್ರಕ್ರಿಯೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಒಬ್ಬ ವ್ಯಕ್ತಿಗೆ 2 ಅಂಗಡಿಗಳನ್ನು ಮಾತ್ರ ನೀಡಲಾಗುತ್ತದೆ. ಪುತ್ತೂರು ಜಾತ್ರೆಯಲ್ಲಿ ಅಂಗಡಿ ಹಾಕಿ ನನ್ನ ಮಗಳಿಗೆ ಮದುವೆ ಮಾಡಿದ್ದೇನೆ. ಮನೆ ಕಟ್ಟಿದ್ದೇನೆ ಎನ್ನುವ ಮಾತುಗಳು ವ್ಯಾಪಾರಿಗಳಿಂದ ಬಂದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ’ ಎಂದರು.

ADVERTISEMENT

ವಾಸ್ತು ಎಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರು ಸೇವಾರೂಪದಲ್ಲಿ ಈ ತಾತ್ಕಾಲಿಕ ಅಂಗಡಿಗಳಿಗೆ ಗುರುತು ಮಾಡಿಕೊಟ್ಟಿದ್ದಾರೆ. ಯಾವುದೇ ತೊಂದರೆ ಉಂಟಾದರೂ ದೇವಳದ ಕಚೇರಿ ಅಥವಾ ನನ್ನನ್ನು ಸಂಪರ್ಕಿಸಿ ಎಂದು ತಿಳಿಸಿದರು.

ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ದಿನೇಶ್ ಪಿ.ವಿ., ಈಶ್ವರ ಬೇಡೆಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ನಳಿನಿ ಪಿ.ಶೆಟ್ಟಿ, ಕೃಷ್ಣವೇಣಿ, ವಾಸ್ತು ಎಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರು ಏಲಂ ನಿಯಮಗಳನ್ನು ಸಭೆಗೆ ಮಂಡಿಸಿದರು.

ಗಿರೀಶ್ ಕುಮಾರ್, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಚಿನ್, ಯಶವಂತ, ದಿನೇಶ್,
ಕೋಟಿಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ವಿದ್ಯಾಮಾತ ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈ, ಉದ್ಯಮಿ ರೋಶನ್ ರೈ ಬನ್ನೂರು, ನವೀನ್‌ಚಂದ್ರ ಭಾಗವಹಿಸಿದ್ದರು.

ನಿಯಮ ಉಲ್ಲಂಘಿಸಿದ ವ್ಯಾಪಾರಿಗಳ ವಿರುದ್ಧ ಕ್ರಮ:

ಬಿಡ್‌ ಮೊತ್ತವನ್ನು ಏಲಂ ನಡೆದ ದಿನವೇ ಪಾವತಿಸಬೇಕು. ತಪ್ಪಿದರೆ ಮುಂಗಡ ಠೇವಣಿ ಮೊಬಲಗನ್ನು ಮುಟ್ಟುಗೋಲು ಹಾಕಿ ಮರು ಹರಾಜು ಮಾಡಲಾಗುವುದು. ವೆಂಕಟರಮಣ ದೇವಸ್ಥಾನದಿಂದ ರಥಬೀದಿಗೆ ಬರುವ ಕಂಬಳ ಗದ್ದೆಯ ಜಾಗದಲ್ಲಿ ಹಾಗೂ ಕಂಬಳದ ಸ್ಟೇಜ್‌ನ 4 ಬದಿಯಲ್ಲಿ ಅನಧಿಕೃತವಾಗಿ ಯಾವುದೇ ವ್ಯಾಪಾರ ಚಟುವಟಿಕೆಗೆ ಅವಕಾಶ ಇಲ್ಲ. ಧ್ವನಿ ವರ್ಧಕ ಬಳಕೆಗೆ ಅನುಮತಿ ಕಡ್ಡಾಯ ಎಂದು ಹೇಳಿದರು.

ಅಂಗಡಿಯ ಮುಂದೆ ಕಚೇರಿಯಿಂದ ನೀಡುವ ಪರವಾನಗಿ ಪತ್ರ, ಭಾವಚಿತ್ರವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಒಳ ಬಾಡಿಗೆಗೆ ಅವಕಾಶ ಇಲ್ಲ. ನೀರು, ಆಹಾರದ ಸ್ವಚ್ಛತೆ ಕಾಪಾಡಲು ನಿಗಾ ವಹಿಸಬೇಕು. ನಿಯಮ ಉಲ್ಲಂಘನೆ ಮಾಡಿದ ವ್ಯಾಪಾರಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.