ಮಂಗಳೂರು: ನಗರದ ಕರಂಗಲ್ಪಾಡಿಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆ ನಡೆಸಿದವನನ್ನು ಕುಂದಾಪುರ ನ್ಯಾಯಾಲಯದ ಗ್ರೂಪ್ ‘ಡಿ’ ನೌಕರ ನವೀನ್ (31) ಎಂದು ಗುರುತಿಸಲಾಗಿದೆ. ನಿರ್ಮಲಾ, ರಿನಾ ರಾಯ್, ಗುಣವತಿ ಗಾಯಗೊಂಡವರು. ನಿರ್ಮಲಾ ಅವರಿಗೆ ಗಂಭೀರ ಗಾಯಗಳಾಗಿವೆ. ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಉಪನ್ಯಾಸಕಿ ಒಬ್ಬರ ಹೆಸರು ಹೇಳಿ, ಗಿಫ್ಟ್ ನೀಡುವುದಿದೆ ಎಂದು ಒಳಬಂದ ವ್ಯಕ್ತಿ, ಏಕಾಏಕಿ ಚೀಲದಿಂದ ಮಚ್ಚು ತೆಗೆದು, ಹಲ್ಲೆ ನಡೆಸಿದ್ದಾನೆ. ಆಫೀಸಿನ ಸಿಬ್ಬಂದಿ ಕೂಗಾಡಿದಾಗ, ಪಕ್ಕದಲ್ಲಿದ್ದ ಜೈಲಿನ ಸಿಬ್ಬಂದಿ, ಸಾರ್ವಜನಿಕರು ಬಂದು, ಹಲ್ಲೆ ನಡೆಸಿದ ವ್ಯಕ್ತಿಯನ್ನು ಹಿಡಿದಿದ್ದಾರೆ’ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ ಸೋಮವಾರದಿಂದ 6, 7ನೇ ತರಗತಿಗಳು ಪ್ರಾರಂಭವಾದ ಕಾರಣ, ಡಯಟ್ ಪ್ರಾಂಶುಪಾಲರಾಗಿರುವ ಡಿಡಿಪಿಐ ಮಲ್ಲೇಸ್ವಾಮಿ, ಶಾಲೆಗಳಿಗೆ ಭೇಟಿ ನೀಡಿದ್ದರು. ಲಿಖಿತ ಸಿಬ್ಬಂದಿ ಮಾತ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಹಲ್ಲೆ ನಡೆದಿದೆ. ಹಲ್ಲೆ ನಡೆದಿರುವ ಮೂವರನ್ನೂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.