ಬೆಳ್ತಂಗಡಿ: ತಾಲ್ಲೂಕಿನ ಕನ್ಯಾಡಿ ಶ್ರೀರಾಮ ಕ್ಷೇತ್ರ, ಉಜಿರೆ ಜನಾರ್ದನ ದೇವಸ್ಥಾನ, ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನ, ನಿಡಿಗಲ್ ಲೋಕನಾಥೇಶ್ವರ ದೇವಸ್ಥಾನ, ನಾವೂರು ಗೋಪಾಲಕೃಷ್ಣ ದೇವಸ್ಥಾನ, ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ, ಬೆಳಾಲು ಮಾಯಾಮಹದೇವ ದೇವಸ್ಥಾನ, ಉಜಿರೆ ಹಳೆಪೇಟೆ ಶ್ರೀರಾಮ ಮಂದಿರದಲ್ಲಿ ಸೇರಿದಂತೆ ತಾಲ್ಲೂಕಿನ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ, ಧಾರ್ಮಿಕ ಉಪನ್ಯಾಸ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಭಜನಾ ಮಂದಿರ, ಕಲ್ಯಾಣ ಮಂಟಪಗಳಲ್ಲೂ ವಿಶೇಷ ಕಾರ್ಯಕ್ರಮಗಳು ನಡೆದವು.
ಕರಸೇವೆಯಲ್ಲಿ ಪಾಲ್ಗೊಂಡಿದ್ದವರನ್ನು ಗೌರವಿಸಲಾಯಿತು. ಮನೆ, ಅಂಗಡಿ, ವಾಹನಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು.
ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ, ಭಜನೆ, ಸೀತಾ ಶ್ರೀರಾಮ ಪರಿವಾರ ದೇವರಿಗೆ ಪೂಜೆ, ರಾಮನಾಮ ತಾರಕ ಮಂತ್ರ ಯಜ್ಞ, ಹವನ, ಪ್ರವಚನ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಲ್ಲಿ ಶಾಸಕ ಹರೀಶ್ ಪೂಂಜ ಅವರ ಸೇವಾರ್ಥ 108 ಸೀಯಾಳಗಳ ಅಭಿಷೇಕ ನಡೆಯಿತು. ಉಜಿರೆ ವೃತ್ತದಲ್ಲಿ ಶ್ರೀರಾಮನ ಪ್ರತಿಕೃತಿಗೆ ಗ್ರಾಮಸ್ಥರು ವಿಶೇಷ ಪೂಜೆ, ನಮನ ಸಲ್ಲಿಸಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಪೂರ್ಣಗೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಉಜಿರೆ ಪರಿಸರದವರು ಜನಾರ್ದನ ದೇವಸ್ಥಾನದ ಮುಂಭಾಗದಿಂದ ಹಮ್ಮಿಕೊಂಡಿದ್ದ ರ್ಯಾಲಿಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು. ಸಮಾಜ ಸೇವಕ ರಾಮಚಂದ್ರ ಶೆಟ್ಟಿ ಭಾಗವಹಿಸಿದ್ದರು.
ಜನಾರ್ದನ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಚಂದ್ಕೂರು, ನಾವೂರು, ಕೊಲ್ಲಿ ದೇಗುಲಗಳಿಗೆ ತೆರಳಿ ಉಜಿರೆಯಲ್ಲಿ ಸಂಪನ್ನಗೊಂಡಿತು.
ನಮ್ಮ ಅಂದಿನ ಸೇವೆಗೆ ಇಂದು ಸಂಪೂರ್ಣ ಫಲ ಸಿಕ್ಕಿದೆ ಎಂದು ಕರ ಸೇವಕ ಕರಂಬಾರಿನ ವಿಶ್ವನಾಥ ದೇವಾಡಿಗ ಸಂಭ್ರಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.