ಮಂಗಳೂರು: ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಯೋಜನೆಯಡಿ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ನಗರದ ರೆಡ್ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಭವನ ನಿರ್ಮಾಣ ಕಾಮಗಾರಿಗೆ ₹ 10 ಲಕ್ಷ ಚೆಕ್ ಅನ್ನು ಮಂಗಳವಾರ, ಬ್ಯಾಂಕ್ ಸಿಇಒ ಅಟನ್ ಕುಮಾರ್ ದಾಸ್ ಅವರು ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಡಾ. ಕುಮಾರ್ ಮಾತನಾಡಿ,‘ಬ್ಯಾಂಕ್ ಆಫ್ ಇಂಡಿಯಾವು ರೆಡ್ಕ್ರಾಸ್ ಸೊಸೈಟಿಗೆ ಸೂಕ್ತ ಸಮಯದಲ್ಲಿ ಆರ್ಥಿಕ ಸಹಕಾರ ನೀಡುತ್ತಿರುವುದು ಸ್ವಾಗತಾರ್ಹ. ಇದರಿಂದ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಅನುಕೂಲವಾಗಲಿದೆ’ ಎಂದರು.
ಅಟನ್ ಕುಮಾರ್ ದಾಸ್ ಮಾತನಾಡಿ, ‘17 ವರ್ಷ ಕರ್ನಾಟಕದೊಂದಿಗೆ ನಂಟಿದೆ. ಇತರರಿಗೆ ಹೋಲಿಸಿದಲ್ಲಿ ಕನ್ನಡಿಗರದ್ದು ಉದಾರ ಗುಣ. ಬ್ಯಾಂಕ್ ಮುಂಬೈನಲ್ಲೂ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಬೇಟಿ ಬಚಾವೋ- ಬೇಟಿ ಪಡಾವೋ ಆಂದೋಲನಕ್ಕೂ ಭಾಗಿಯಾಗಿದ್ದೇವೆ.ಪ್ರತಿ ಶಾಖೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಒಂದನೇ ತರಗತಿಯಿಂದ ಪದವಿವರೆಗೆ ಶಿಕ್ಷಣ ಕೊಡಿಸಲಾಗುತ್ತಿದೆ’ ಎಂದರು.
ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ವಿವೇಕಾನಂದ ದುಬೆ, ವಲಯ ಮ್ಯಾನೇಜರ್ ಎಂ.ಪಿ. ರಮೇಶ್, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸದಸ್ಯರಾದ ಹರೀಶ್ ರೈ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.