ADVERTISEMENT

ಮಂಗಳೂರು | ಬ್ಯಾಂಕಿನಿಂದ ₹ 62 ಲಕ್ಷ ವಂಚನೆ: ದೂರು ದಾಖಲು

ಓವರ್ ಡ್ರಾಫ್ಟ್ ಖಾತೆಯಲ್ಲಿ ಅಕ್ರಮ ವಹಿವಾಟು–ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 4:30 IST
Last Updated 13 ಆಗಸ್ಟ್ 2024, 4:30 IST

ಮಂಗಳೂರು: ‘ಬ್ಯಾಂಕ್‌ ಒಂದರ ಫಳ್ನೀರ್‌ ಶಾಖಾ ಮುಖ್ಯಸ್ಥ ಹಾಗೂ ಸಹಾಯಕ ವ್ಯವಸ್ಥಾಪಕ ಸೇರಿಕೊಂಡು ನನ್ನ ಸಾಲದ ಖಾತೆಯ ಓವರ್‌ ಡ್ರಾಫ್ಟ್‌ನಲ್ಲಿ 11 ವಹಿವಾಟುಗಳನ್ನು ಅಕ್ರಮವಾಗಿ ನಡೆಸಿ ಒಟ್ಟು ₹ 62.40 ಲಕ್ಷ ವಂಚಿಸಿದ್ದಾರೆ’ ಎಂದು ಆರೋಪಿಸಿ ಮೆ|ಜಾಝಾ ಇನ್ಫ್ರಾ ಸಂಸ್ಥೆಯ ಪಾಲುದಾರ  ಮೊಹಮ್ಮದ್‌ ಸಫ್ವಾನ್‌ ದೂರು ನೀಡಿದ್ದು, ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಸುಮಾರು ₹ 4 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಅಡವಿಟ್ಟುಕೊಂಡ ಬ್ಯಾಂಕ್‌ ಓವರ್ ಡ್ರಾಫ್ಟ್‌ ಮಿತಿ ₹ 70 ಲಕ್ಷದಷ್ಟಿರುವ ಸಾಲವನ್ನು 2023ರ ಜುಲೈ 31ರಂದು ಬ್ಯಾಂಕ್‌ ಮಂಜೂರು ಮಾಡಿತ್ತು. ಸಾಲವನ್ನು ಬಡ್ಡಿ ಸಮೇತ ತೀರಿಸಿದ ಬಳಿಕವೂ ಬ್ಯಾಂಕ್ ಸಾಲಕ್ಕೆ ಅಡಮಾನವಿರಿಸಿದ ಸ್ಥಿರಾಸ್ತಿಯ ದಾಖಲಾತಿಗಳನ್ನು ಮರಳಿಸಿಲ್ಲ ಎಂದು ಮೊಹಮ್ಮದ್‌ ಸಫ್ವಾನ್‌ ಆರೋಪಿಸಿದ್ದಾರೆ.’

‘ಸಾಲದ ವ್ಯವಹಾರಕ್ಕೆ ಚೆಕ್ ನೀಡಲು ಅರ್ಜಿ ಸಲ್ಲಿಸುವಂತೆ ಆರೋಪಿಗಳು ಹೇಳಿದ್ದರು. ನನ್ನ ಮನೆ ಬ್ಯಾಂಕಿನ ಹಿಂಬದಿಯಲ್ಲೇ ಇದ್ದರೂ ಆ ವಿಳಾಸಕ್ಕೆ ಮಂಜೂರಾದ ಚೆಕ್ ಪುಸ್ತಕವನ್ನು ರಿಜಿಸ್ಟರ್ ಪೋಸ್ಟ್ ಮುಖಾಂತರ ಆರೋಪಿತರು ಕಳುಹಿಸಿದ್ದಾರೆ. ಪೋಸ್ಟ್ ಮ್ಯಾನ್ ಜೊತೆಗೆ ಶಾಮೀಲಾಗಿ ಚೆಕ್ ಪುಸ್ತಕವನ್ನು ವಾಪಾಸು ಬ್ಯಾಂಕಿಗೆ ಬರುವಂತೆ ಮಾಡಿದ್ದಾರೆ. ಸಂಸ್ಥೆಯ ನಕಲಿ ಸೀಲು ಬಳಸಿ, ನನ್ನ ಸಹಿಯನ್ನು ಫೋರ್ಜರಿ ಮಾಡಿ ಅಂಚೆ ಡೆಲಿವರಿ ಸ್ಲಿಪ್‌ ನಲ್ಲಿ ನಮೂದು ಮಾಡಿ ಚೆಕ್ ಬುಕ್ ಅನ್ನು ಅವರೇ ಪಡೆದುಕೊಂಡಿದ್ದಾರೆ. ಬ್ಯಾಂಕಿನ ಯೆಯ್ಯಾಡಿ ಕಚೇರಿಯಲ್ಲಿರುವ ಪ್ರಾದೇಶಿಕ ಮುಖ್ಯಸ್ಥರೂ ಈ ಅವ್ಯವಹಾರ ದಲ್ಲಿ ಶಾಮೀಲಾಗಿದ್ದಾರೆ.’

ADVERTISEMENT

‘2023ರ ಜುಲೈ 31ರಿಂದ  ಡಿಸೆಂಬರ್‌ 6ರವರೆಗೆ  ನನ್ನ ಓವರ್ ಡ್ರಾಫ್ಟ್‌ ಖಾತೆಯಲ್ಲಿ 11 ವಹಿವಾಟುಗಳನ್ನು ನಡೆಸಿ ಒಟ್ಟು ₹ 62.40 ಲಕ್ಷ ಹಣವನ್ನು ನನ್ನ ಖಾತೆಯಿಂದ ನಗದೀಕರಿಸಿದ್ದಾರೆ. ನಾನು ಬಡ್ಡಿ ತೆರುವಂತೆ ಮಾಡಿದ್ದಾರೆ. ಈಗ ಸಂಪೂರ್ಣ ಹೊಣೆಗಾರಿಕೆಯನ್ನು ನನ್ನ ಮೇಲೆ ಹಾಕಿದ್ದಾರೆ. ನನ್ನ ಸಂಸ್ಥೆಯ ಹೆಸರಿನ ಓವರ್ ಡ್ರಾಫ್ಟ್‌ ಖಾತೆಯಲ್ಲಿ 2023ರ ಅ.31, ನ.3, ನ.10, ನ.15 ಮತ್ತು ನ.17 ರಂದು ನಡೆದ ವಹಿವಾಟಿನ ಕುರಿತ ನಮೂದುಗಳು ನಕಲಿ. 1,900 ಗ್ರಾಂ ತೂಕದ ಚಿನ್ನಾಭರಣಗಳನ್ನು ಸಾಲಕ್ಕೆ ಅಡಮಾನವಿಟ್ಟುಕೊಂಡು ಮರಳಿಸದೇ ವಂಚನೆ ಮಾಡಿದ್ದಾರೆ ಎಂದು ಮೊಹಮ್ಮದ್‌ ಸಫ್ವಾನ್‌ ದೂರಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.