ADVERTISEMENT

ಬಂಟ್ವಾಳ: ಮೊಹಿದೀನ್ ನಿಧನ; ಸಭೆ ಮೊಟಕು

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 15:48 IST
Last Updated 10 ಜುಲೈ 2018, 15:48 IST
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿದರು.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿದರು.   

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿ ವಿಧಾನಸಭೆ ಚುನಾವಣೆ ಬಳಿಕ ಮಂಗಳವಾರ ನಡೆದ ಪ್ರಥಮ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯನ್ನು ತಡವಾಗಿ ಬಂದ ಹಿರಿಯ ಸದಸ್ಯರೊಬ್ಬರ ಸಲಹೆಯಂತೆ ಮಾಜಿ ಸಚಿವ ಬಿ.ಎ.ಮೊಹಿದೀನ್‌ ಅರ್ಧದಲ್ಲೇ ಮೊಟಕುಗೊಳಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಸಾಮಾನ್ಯಸಭೆಯಲ್ಲಿ ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕ, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಮೊಹಿದೀನ್‌ ಗೌರವಾರ್ಥ ಮೌನ ಪ್ರಾರ್ಥನೆ ನಡೆಸಲಾಗಿತ್ತು.

ತಾಲ್ಲೂಕಿನ ಬಹುತೇಕ ಅಂಗನವಾಡಿ ಮತ್ತು ಶಾಲೆಗಳ ಜಮೀನಿನ ಅಳತೆ ನಡೆಸದ ಪರಿಣಾಮ ಪಹಣಿಪತ್ರ ಮತ್ತಿತರ ದಾಖಲಾತಿ ಸಿಗುತ್ತಿಲ್ಲ. ಕಂದಾಯ ಇಲಾಖೆ ವತಿಯಿಂದ ಅರ್ಹರಿಗೆ ಪಡಿತರ ಚೀಟಿ ತ್ವರಿತವಾಗಿ ಸಿಗಬೇಕು. ಪ್ರಾಕೃತಿಕ ವಿಕೋಪ ಯೋಜನೆಯಡಿ ಕುಸಿತಕ್ಕೀಡಾ ಮನೆಗಳಿಗೆ ನೀಡುವಂತೆ ಕೃಷಿಕರ ಬೆಳೆಹಾನಿ, ಬಾವಿ, ಹಟ್ಟಿ, ಶಾಲೆ ಮತ್ತಿತರ ಕಟ್ಟಡಗಳಿಗೂ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರಿಂದ ಭಾರಿ ಚರ್ಚೆ ನಡೆಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ‘ರಾಜ್ಯ ಬಜೆಟಿನಲ್ಲಿ ಜಿಲ್ಲೆಗೆ ಸಾಲಮನ್ನಾ ಭಾಗ್ಯ ಸಿಕ್ಕಿಲ್ಲ. ಇದರಿಂದಾಗಿ ಅಧಿಕಾರಿಗಳು ಮಳೆಹಾನಿ ಸಂದರ್ಭದಲ್ಲಿ ರೈತರ ಬಗ್ಗೆ ಮಾನವೀಯತೆ ತೋರಬೇಕು’ ಎಂದರು.

ADVERTISEMENT

ಸದಸ್ಯರಾದ ಕೆ.ಸಂಜೀವ ಪೂಜಾರಿ, ರಮೇಶ ಕುಡ್ಮೇರು, ಗೀತಾ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ ಮಾಧವ ಮಾವೆ, ರವೀಂದ್ರ ಕಂಬಳಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ಪುರಂದರ ಹೆಗ್ಡೆ ಇದ್ದರು.

ಅಂತಿಮವಾಗಿ ಮಧ್ಯಾಹ್ನ ಸಭೆ ಮುಕ್ತಾಯ ಹಂತ ತಲುಪುವ ವೇಳೆ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಧಾವಿಸಿ ಬಂದು ‘ಈ ಕ್ಷೇತ್ರದ ಮಾಜಿ ಶಾಸಕ, ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಬಿ.ಎ.ಮೊಹಿದೀನ್‌ ನಿಧನರಾಗಿದ್ದು, ಸಭೆ ಮುಂದೂಡಬೇಕು’ ಎಂದು ಆಗ್ರಹಿಸಿದರು. ಇದನ್ನು ಸದಸ್ಯ ಆದಂ ಕುಂಞಿ ಬೆಂಬಲಿಸಿದರು.

ಈಗಾಗಲೇ ಸಭೆ ಮುಕ್ತಾಯ ಹಂತ ತಲುಪಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹೇಳುತ್ತಿದ್ದಂತೆಯೇ ಅವರಿಬ್ಬರು , ಸಭೆಯಿಂದ ಹೊರ ನಡೆದರು. ಇದರಿಂದ ಕೆಲಹೊತ್ತು ವಿಚಲಿತರಾದ ಅಧ್ಯಕ್ಷರು ಸಭೆಯಲ್ಲಿ ಇಲ್ಲಿಗೆ ಮುಕ್ತಾಯಗೊಳಿಸುವುದಾಗಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.