ADVERTISEMENT

ಪುಂಜಾಲಕಟ್ಟೆ: ಕಾರು ಡಿಕ್ಕಿ, ಬೈಕ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:34 IST
Last Updated 30 ಡಿಸೆಂಬರ್ 2025, 8:34 IST
ಮಹಮ್ಮದ್ ಇಮ್ರಾನ್ ತ್ವಾಹ
ಮಹಮ್ಮದ್ ಇಮ್ರಾನ್ ತ್ವಾಹ   

ಬಂಟ್ವಾಳ: ಇಲ್ಲಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟೆಮನೆ ನರ್ಸರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಬೈಕ್ ಸವಾರ ಮಾರ್ನಬೈಲು ನಿವಾಸಿ ಮಹಮ್ಮದ್ ಇಮ್ರಾನ್ ತ್ವಾಹ( 40 ) ಎಂದು ಗುರುತಿಸಲಾಗಿದೆ. ಇವರು ಪ್ರಸಕ್ತ ಕುಕ್ಕಾಜೆ ಎಂಬಲ್ಲಿ ವಾಸವಾಗಿದ್ದು, ಡಿಶ್ ಅಳವಡಿಕೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಇವರು ಪುಂಜಾಲಕಟ್ಟೆ ಕಡೆಯಿಂದ ಬಂಟ್ವಾಳ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಕಟ್ಟಮನೆ ನರ್ಸರಿ ಸಮೀಪದ ರಾಷ್ಟ್ರೀಯ ಹೆದ್ದಾರಿ ತಿರುವು ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು, ಈ ರಭಸಕ್ಕೆ ಬೈಕ್ ಸಹಿತ ಸವಾರ ಬೈಕ್ ರಸ್ತೆಗೆ ಎಸೆಯಲ್ಪಟ್ಟಿರುವುದು ಕಂಡು ಬಂದಿದೆ. ಮಂಗಳೂರು ನಗರ ಅಪರಾಧ ಪತ್ತೆ ದಳ ಸಿಬ್ಬಂದಿ (ಡಿ ಸಿ ಆರ್ ಬಿ) ಪ್ರಸನ್ನ ಎಂಬವರು ನ್ಯಾನೊ ಕಾರು ಚಲಾಯಿಸಿಕೊಂಡು ಬೆಳ್ತಂಗಡಿ ಸಂಬಂಧಿಕರ ಮನೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಮನೆಗೆ ಕೊಂಡು ಹೋಗುತ್ತಿದ್ದ ಹಸಿ ಮಾಂಸ ಮತ್ತು ಶೇಂದಿ ಬಾಟಲು ಪತ್ತೆಯಾಗಿದೆ. ಈ ಬಗ್ಗೆ ಮದ್ಯ ಸೇವಿಸಿ ಪೊಲೀಸ್ ಕಾರು ಡಿಕ್ಕಿ ಹೊಡೆದಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಕಾರು ಚಾಲಕನನ್ನು ಪೊಲೀಸರು ಪರೀಕ್ಷೆಗೆ ಒಳಪಡಿಸಿದ್ದು, ಯಾವುದೇ ಮದ್ಯ ಸೇವನೆ ಮಾಡಿರಲಿಲ್ಲ ಎಂದಿದ್ದಾರೆ. ಇದಕ್ಕಾಗಿ ಅವರ ರಕ್ತ ಪರೀಕ್ಷೆಗೆ ವೈದ್ಯಕೀಯ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.