ADVERTISEMENT

‘ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರ’

ಇನೋಳಿ: ಬ್ಯಾರೀಸ್ ಕಾಲೇಜಿನಲ್ಲಿ ಪದವಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 11:58 IST
Last Updated 27 ಡಿಸೆಂಬರ್ 2020, 11:58 IST
ಇನೋಳಿ ಬ್ಯಾರೀಸ್ ಕಾಲೇಜಿನಲ್ಲಿ ಭಾನುವಾರ ಪದವಿ ದಿನಾಚರಣೆ ನಡೆಯಿತು
ಇನೋಳಿ ಬ್ಯಾರೀಸ್ ಕಾಲೇಜಿನಲ್ಲಿ ಭಾನುವಾರ ಪದವಿ ದಿನಾಚರಣೆ ನಡೆಯಿತು   

ಮುಡಿಪು: ‘ಶಿಕ್ಷಣದೊಂದಿಗೆ ಕೌಶಲ, ಶಿಸ್ತು, ಮೌಲ್ಯಗಳನ್ನು ರೂಢಿಸಿಕೊಂಡಾಗ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಸಣಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರಗಳಾಗಬೇಕು’ ಎಂದು ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವೆಲೇರಿಯನ್ ರಾಡ್ರಿಗಸ್ ಆಶಯ ವ್ಯಕ್ತಪಡಿಸಿದರು.

ಇಲ್ಲಿನ ಇನೋಳಿಯಲ್ಲಿನ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 8ನೇ ಪದವಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯೂ ಪ್ರಮುಖವಾಗಿದೆ. ಪದವಿ ಶಿಕ್ಷಣವು ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾಗಿದೆ. ನಾವು ಕಲಿತ ಶಿಕ್ಷಣ ಸಂಸ್ಥೆಗಳಿಂದಾಗಿ ನಾವು ನಮ್ಮ ಸಾಮರ್ಥ್ಯದೊಂದಿಗೆ ಸಮಾಜದಲ್ಲಿ ಗುರುತಿಸುವಂತಾಗಬೇಕು’ ಎಂದು ಹೇಳಿದರು.

ADVERTISEMENT

ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ ಪ್ಲಾನಿಂಗ್‌ನ ನಿರ್ದೇಶಕಿ ಡಾ.ದೀಪಿಕಾ ಶೆಟ್ಟಿ ಮಾತನಾಡಿ, ‘ಜೀವನದಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರವನ್ನು ಮರೆಯದೇ ಮುನ್ನಡೆಯಬೇಕು. ನಾವು ಪಡೆದ ಶಿಕ್ಷಣ ಮತ್ತು ಕೌಶಲವು ಸಮಾಜಕ್ಕೆ ಕೊಡುಗೆಯಾಗಬೇಕಿದೆ. ನಮ್ಮ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳೋಣ’ ಎಂದರು.

ಮುಂಬೈ ಲೋದಾ ಗ್ರೂಪ್‌ ಉಪಾಧ್ಯಕ್ಷ ಗಣೇಶ್ ಪೂಜಾರಿ, ಸಾಮಾಜಿಕ ಜಾಲತಾಣದ ಬಳಕೆ ಮೂಲಕ ಯಶಸ್ವಿ ಜೀವನದ ಕುರಿತು ಉಪನ್ಯಾಸ ನೀಡಿದರು.

ಬ್ಯಾರೀಸ್ ಕಾಲೇಜಿನ ಮುಖ್ಯಸ್ಥ ಸೈಯದ್ ಮುಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಅಜೀಜ್ ಮುಸ್ತಫಾ, ಡಾ.ಎಸ್.ಐ. ಮಂಜೂರು ಭಾಷಾ, ಅಶೋಕ ಎಲ್. ಪಿ. ಮೆಂಡೋನ್ಸ, ಪ್ರೊ.ಆಫಿಯಾ ಇದ್ದರು.

ವಿವಿಧ ವಿಭಾಗಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.