ADVERTISEMENT

ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಆರಂಭ

ಆದೇಶ ಮಾಡಿದಷ್ಟೇ ಕನಿಷ್ಠ ಕೂಲಿ ಕೊಡಿ– ಪ್ರತಿಭಟನಕಾರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 4:10 IST
Last Updated 25 ನವೆಂಬರ್ 2025, 4:10 IST
ಮಂಗಳೂರಿನಲ್ಲಿ ಸೋಮವಾರ ಆರಂಭಗೊಂಡ ಧರಣಿಯಲ್ಲಿ  ಜೆ.ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿದರು. ಭಾರತಿ ಬೋಳಾರ, ವಸಂತ ಆಚಾರಿ, ಬಿ.ಎಂ.ಭಟ್‌ ಮೊದಲಾದವರು ಭಾಗವಹಿಸಿದ್ದರು
ಮಂಗಳೂರಿನಲ್ಲಿ ಸೋಮವಾರ ಆರಂಭಗೊಂಡ ಧರಣಿಯಲ್ಲಿ  ಜೆ.ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿದರು. ಭಾರತಿ ಬೋಳಾರ, ವಸಂತ ಆಚಾರಿ, ಬಿ.ಎಂ.ಭಟ್‌ ಮೊದಲಾದವರು ಭಾಗವಹಿಸಿದ್ದರು   

ಮಂಗಳೂರು: ಬೀಡಿ ಕಾರ್ಮಿಕರಿಗೆ ನಿಗದಿಪಡಿಸಿದಷ್ಟು ಕನಿಷ್ಠ ಕೂಲಿಯನ್ನು ಮಾಲೀಕರು ನೀಡುತ್ತಿಲ್ಲ  ಹಾಗೂ ಈ ಕುರಿತ ಆದೇಶ ಜಾರಿಗೆ ಸರ್ಕಾರ ಮೀನ ಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಬೀಡಿ ಕಾರ್ಮಿಕರು ಇಲ್ಲಿನ ಮಿನಿ ವಿಧಾನ ಸೌಧದ ಎದುರು ಸಿಐಟಿಯು ನೇತೃತ್ವದಲ್ಲಿ ಅನಿರ್ದಿಷ್ಟಾವಧಿವರೆಗೆ ಅಹೋರಾತ್ರಿ ಧರಣಿಯನ್ನು ಸೋಮವಾರ ಆರಂಭಿಸಿದರು. 

ಧರಣಿಗೆ ಚಾಲನೆ ನೀಡಿ ಮಾತನಾಡಿದ ರಾಜ್ಯ ಬೀಡಿ ಫೆಡರೇಶನ್ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ‘ದೇಶದ 13 ರಾಜ್ಯಗಳಲ್ಲಿ 65 ಲಕ್ಷ ಬೀಡಿ ಸುತ್ತುವವರು ಸೇರಿದಂತೆ ಒಟ್ಟು  3 ಕೋಟಿ ಬೀಡಿ ಕಾರ್ಮಿಕರಿದ್ದಾರೆ. ಅವರಲ್ಲಿ ಶೇ 95ರಷ್ಟು ಮಂದಿ ಮಹಿಳೆಯರು. ಬಹುತೇಕರು  ಅತಿ ಬಡವರು. ಬಿಜೆಪಿ ಹಾಗೂ ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ಬೀಡಿ ಕಾರ್ಮಿಕರ ಬದುಕನ್ನೇ ಕತ್ತಲಿನಲ್ಲಿಟ್ಟವೆ. ಅವರನ್ನು ವಂಚಿಸುತ್ತಾ ಬಂದಿವೆ’ ಎಂದು ಆರೋಪಿಸಿದರು.  

‘ಬೀಡಿ ಕಾರ್ಮಿಕರಿಗೆ ಸರ್ಕಾರವೇ ನಿಗದಿಪಡಿಸಿದ ಕನಿಷ್ಠ ಕೂಲಿ 7 ವರ್ಷಗಳಿಂದ ಜಾರಿ ಆಗಿಲ್ಲ.  ಕಾರ್ಮಿಕರನ್ನು ಶೋಷಿಸುತ್ತಿರುವ ಬೀಡಿ ಮಾಲಕರ ವಿರುದ್ಧ ಕ್ರಮ‌ಕೈಗೊಂಡಿಲ್ಲ’ ಎಂದು ದೂರಿದರು.

ADVERTISEMENT

ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ  ಬಿ.ಎಂ. ಭಟ್, ‘ದುಡಿಯುವವರೇ ಮತ ನೀಡಿ ಗೆಲ್ಲಿಸಿದ ಸರ್ಕಾರಗಳು ಅವರ ಪರ ನಿಲ್ಲುವುದನ್ನು ಬಿಟ್ಟು, ಅವರಿಗೆ ಸರಿಯಾಗಿ ವೇತನ ನೀಡದ ಬೀಡಿ ಕಂಪನಿ ಮಾಲೀಕರ  ರಕ್ಷಣೆಗೆ ನಿಲ್ಲುತ್ತಿವೆ. ಹಿಂದೂಗಳನ್ನು ಉದ್ಧಾರ ಮಾಡುತ್ತೇವೆ ಎಂದು ಅಧಿಕಾರ ಪಡೆದವರಿಗೆ ಬೀಡಿ ಕಾರ್ಮಿಕರಲ್ಲಿ ಬಹುತೇಕರು ಹಿಂದೂಗಳು ಎಂದು ಗೊತ್ತಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.
 
ಪ್ರತಿಭಟನಕಾರರನ್ನು ಭೇಟಿ ಮಾಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ‘ಬೀಡಿ ಕಾರ್ಮಿಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ’ ಎಂದು ಭರವಸೆ ನೀಡಿದರು.

‘ಸಮುದಾಯ’ ಸಾಂಸ್ಕೃತಿಕ ಸಂಘಟನೆಯ ವಾಸುದೇವ ಉಚ್ಚಿಲ್, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಬೀಡಿ ಕಾರ್ಮಿಕರ ಸಂಘಟನೆಯ ಮುಖಂಡರಾದ ಜಯಂತಿ ಶೆಟ್ಟಿ  ಮಾತನಾಡಿದರು. ಬೀಡಿ ಫೆಡರೇಷನ್‌ನ ಜಿಲ್ಲಾ ಘಟಕದ ಅಧ್ಯಕ್ಷರಾದ ಸುಕುಮಾರ್ ತೊಕ್ಕೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಖಜಾಂಚಿ ಯೋಗೀಶ್ ಜಪ್ಪಿನಮೊಗರು, ಬೀಡಿ ಕಾರ್ಮಿಕರ ಮುಖಂಡರಾದ ಜಯಂತ ನಾಯಕ್, ಪ್ರಮೋದಿನಿ,ವಿಲಾಸಿನಿ, ಸುಂದರ ಕುಂಪಲ, ಬಾಬು ದೇವಾಡಿಗ, ಬಾಬು ಪಿಲಾರ್, ಈಶ್ವರೀ ಬೆಳ್ತಂಗಡಿ, ಜಯಶ್ರೀ, ಪುಷ್ಪಾ, ಭಾರತಿ ಬೋಳಾರ, ವಸಂತಿ ಕುಪ್ಪೆಪದವು, ಕಟ್ಟಡ ಕಾರ್ಮಿಕರ ಸಂಘಟನೆಯ ಜನಾರ್ಧನ ಕುತ್ತಾರ್, ರವಿಚಂದ್ರ ಕೊಂಚಾಡಿ, ರೈತ ಸಂಘಟನೆಯ ಕೃಷ್ಣಪ್ಪ ಸಾಲ್ಯಾನ್, ಶೇಖರ್ ಕುಂದರ್, ಸದಾಶಿವದಾಸ್, ಯುವಜನ ನಾಯಕರಾದ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಅಭಿಷೇಕ್ ಬೆಳ್ತಂಗಡಿ, ಜಯಲಕ್ಷ್ಮಿ, ಲೋಲಾಕ್ಷಿ ಮುಂತಾದವರು ಭಾಗವಹಿಸಿದ್ದರು.

ಕಾರ್ಮಿಕ ಸಚಿವರಿಂದ ಸಭೆ 27ರಂದು

‘ಬೀಡಿ ಕಾರ್ಮಿಕರಿಗೆ ಬಾಕಿ ವೇತನವನ್ನು ಕೊಡಿಸುವ ಬಗ್ಗೆ ಹಾಗೂ ಕಾನೂನುಬದ್ಧವಾಗಿ ಕನಿಷ್ಠ ಕೂಲಿಯನ್ನು ಜಾರಿಗೊಳಿಸುವ ಬಗ್ಗೆ ಚರ್ಚಿಸಲು ರಾಜ್ಯದ ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಇದೇ 27ರಂದು ಕಾರ್ಮಿಕರ ಮತ್ತು ಬೀಡಿ ಕಂಪನಿ ಮಾಲೀಕರ ಜಂಟಿ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಕಾರ್ಮಿಕರ ಹಿತ ಕಾಯುವ ತೀರ್ಮಾನ ಆಗದಿದ್ದರೆ ಇದೇ 28ರಂದು ಕಾರ್ಮಿಕ ಇಲಾಖೆ ಸಹಾಯಕ‌ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ’ ಎಂದು ಜೆ.ಬಾಲಕೃಷ್ಣ ಶೆಟ್ಟಿ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.