ADVERTISEMENT

ಉಳ್ಳಾಲ: ಅ.7ರಿಂದ ಬೀಡಿ ಕಂಪನಿಗಳ ಮುಂದೆ ಹೋರಾಟ

ಬೀಡಿ ಕಾರ್ಮಿಕರ ಕನಿಷ್ಠ ವೇತನಕ್ಕಾಗಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:12 IST
Last Updated 3 ಸೆಪ್ಟೆಂಬರ್ 2025, 4:12 IST
ಕೋಟೆಕಾರ ಸರ್ಕಲ್ ಬೀಡಿ ಕಾರ್ಮಿಕ ಸಂಘಟನೆಯ ವಾರ್ಷಿಕ ಸಭೆ ತೊಕ್ಕೊಟ್ಟುವಿನಲ್ಲಿ ಜರುಗಿತು
ಕೋಟೆಕಾರ ಸರ್ಕಲ್ ಬೀಡಿ ಕಾರ್ಮಿಕ ಸಂಘಟನೆಯ ವಾರ್ಷಿಕ ಸಭೆ ತೊಕ್ಕೊಟ್ಟುವಿನಲ್ಲಿ ಜರುಗಿತು   

ಉಳ್ಳಾಲ: ಬೀಡಿ ಕಾರ್ಮಿಕರಿಗೆ 2018ರಿಂದ ಬಾಕಿ ಇರಿಸಿಕೊಂಡಿರುವ ತುಟ್ಟಿಭತ್ಯೆ ಪಾವತಿ ವಿಳಂಬ ಹಾಗೂ ಕನಿಷ್ಠ ವೇತನಕ್ಕಾಗಿ ಒತ್ತಾಯಿಸಿ ಬೀಡಿ ಕಂಪನಿಗಳ ಮುಂದೆ ಅಕ್ಟೋಬರ್ 7ರಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಷನ್‌ನ ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ  ಹೇಳಿದರು.

ತೊಕ್ಕೊಟಿನಲ್ಲಿ ಮಂಗಳವಾರ ನಡೆದ ಕೋಟೆಕಾರ್ ವೃತ್ತದ ಬೀಡಿ ಕಾರ್ಮಿಕರ ಸಂಘದ 31ನೇ ವಾರ್ಷಿಕ  ಸಭೆಯಲ್ಲಿ ಅವರು ಮಾತನಾಡಿದರು.

ತುಟ್ಟಿಭತ್ಯೆಯನ್ನು ಪ್ರತೀ ಸಾವಿರ ಬೀಡಿಗೆ ₹7ರಂತೆ ಕೊಡುವುದಾಗಿ ಒಪ್ಪಿಕೊಂಡಿರುವ ಬೀಡಿ ಮಾಲೀಕರು ಭತ್ಯೆ ಪಾವತಿಗೆ ವಿಳಂಬ ಮಾಡುತ್ತಿದ್ದಾರೆ.ಏಪ್ರಿಲ್‌ನಲ್ಲಿ ಪಾವತಿಸುವುದಾಗಿ ಭರವಸೆ ನೀಡಿ‌ದ್ದ ಮಾಲೀಕರು ಸೆಪ್ಟೆಂಬರ್ ಆದರೂ ಇನ್ನೂ ಪಾವತಿ ಮಾಡಿಲ್ಲ. 2024ರ ಕನಿಷ್ಠ ಕೂಲಿಯನ್ನೂ ನೀಡಿಲ್ಲ. ಈ ಬಗ್ಗೆ ಕಾರ್ಮಿಕ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಅವಿಭಜಿತ ದ.ಕ.ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾದ ಬೀಡಿ ಉದ್ಯಮದ ಬಿಕ್ಕಟ್ಟನ್ನು ಬಂಡವಾಳವನ್ನಾಗಿ ಮಾಡಿಕೊಂಡ ಬೀಡಿ ಕಂಪನಿ ಮಾಲೀಕರು ಕಾರ್ಮಿಕರಿಗೆ ಭಾರಿ ಅನ್ಯಾಯ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಕೂಡ ಹಲವಾರು ವರ್ಷಗಳಿಂದ ಬೀಡಿ ಕಾರ್ಮಿಕರು ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿವೆ ಎಂದು ದೂರಿದರು.

ಬೀಡಿ ಕಾರ್ಮಿಕರ ಸಂಘಟನೆಯ ಹಿರಿಯ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು, ಜಯಂತ ನಾಯಕ್, ಸುಂದರ ಕುಂಪಲ, ಪ್ರಮೋದಿನಿ ಕಲ್ಲಾಪು, ರೈತ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಬೀಡಿ ಕಾರ್ಮಿಕರ ನಾಯಕರಾದ ವಿಲಾಸಿನಿ ತೊಕ್ಕೊಟ್ಟು, ರೋಹಿದಾಸ್ ಭಟ್ನಗರ, ಜನಾರ್ದನ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.

ಹಿರಿಯ ಬೀಡಿ ಕಾರ್ಮಿಕರ ಮುಖಂಡರಾದ ಪದ್ಮಾವತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೀಡಿ ಕಾರ್ಮಿಕರ ಬದುಕಿಗೆ ಸಂಬಂಧಿಸಿದ ಹಲವು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಬಾಲಕೃಷ್ಣ ಶೆಟ್ಟಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.