ADVERTISEMENT

ಬೆಂಗಳೂರು– ಮಂಗಳೂರು-ಕಣ್ಣೂರು ರೈಲು ಕೊಯಿಕ್ಕೋಡ್‌ಗೆ ವಿಸ್ತರಣೆ

ಪ್ರಸ್ತಾವಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 14:26 IST
Last Updated 30 ಜನವರಿ 2024, 14:26 IST

ಮಂಗಳೂರು: ಇಲ್ಲಿನ ಜನರ ವಿರೋಧದ ನಡುವೆಯೂ ಬೆಂಗಳೂರು– ಮಂಗಳೂರು– ಕಣ್ಣೂರು ಎಕ್ಸ್‌ಪ್ರೆಸ್‌ ರೈಲನ್ನು ಕೇರಳದ ಕೊಯಿಕ್ಕೋಡ್‌ವರೆಗೆ ವಿಸ್ತರಿಸುವ ದಕ್ಷಿಣ ರೈಲ್ವೆಯ ಪ್ರಸ್ತಾವಕ್ಕೆ ರೈಲ್ವೆ ಸಚಿವಾಲಯ ಸಮ್ಮತಿಸಿದೆ. 

ಬೆಂಗಳೂರು–ಮಂಗಳೂರು– ಕಾರವಾರ ರೈಲು ಮಂಜೂರಾದ ಬಳಿಕೆ ಕೆಲವೇ ದಿನಗಳಲ್ಲಿ ಅದರ ಕೆಲವು ಬೋಗಿಗಳನ್ನು ಕಣ್ಣೂರಿಗೆ ವಿಸ್ತರಿಸಲಾಗಿತ್ತು. ಈ ಪ್ರಸ್ತಾವಕ್ಕೂ ಮಂಗಳೂರಿನ ರೈಲು ಪ್ರಯಾಣಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೇರಳದ ಪ್ರಬಲ ಲಾಬಿ ಮುಂದೆ ಮಂಗಳೂರಿಗರ ವಿರೋಧಕ್ಕೆ ಮನ್ನಣೆ ಸಿಕ್ಕಿರಲಿಲ್ಲ.

ಈ ರೈಲು ಕಣ್ಣೂರಿಗೆ ವಿಸ್ತರಣೆ ಆದ ಬಳಿಕ, ಆ ಎಂಟು ಬೋಗಿಗಳಲ್ಲಿ ಕೇರಳದ ಪ್ರಯಾಣಿಕರೇ ತುಂಬಿರುತ್ತಾರೆ. ಈಗ ಕೊಯಿಕ್ಕೋಡ್‌ಗೆ ರೈಲು ವಿಸ್ತರಣೆ ಆದರೆ ಮಂಗಳೂರಿನ ಜನರು ತಮ್ಮ ಕೋಟಾದ ಮತ್ತಷ್ಟು ಸೀಟು ಕಳೆದುಕೊಳ್ಳಬೇಕಾಗುತ್ತದೆ ಎಂಬುದು ರೈಲ್ವೆ ಹೋರಾಟಗಾರರ ಆತಂಕ.

ADVERTISEMENT

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾತ್ರಿ 9.35ಕ್ಕೆ ಹೊರಡುವ ಈ ರೈಲು ಮರುದಿನ ಬೆಳಿಗ್ಗೆ 10.55ಕ್ಕೆ ಕಣ್ಣೂರು ತಲುಪಲಿದೆ. ಅಲ್ಲಿಂದ ಬೆಳಿಗ್ಗೆ 11ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ಕೊಯಿಕ್ಕೋಡ್‌ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3.30ಕ್ಕೆ ಹೊರಟು ಸಂಜೆ 5ಕ್ಕೆ ಕಣ್ಣೂರು ತಲುಪಲಿದೆ. ಅಲ್ಲಿಂದ ಸಂಜೆ 5.05ಕ್ಕೆ ಹೊರಡು ಬೆಳಿಗ್ಗೆ 6.35ಕ್ಕೆ ಬೆಂಗಳೂರು ತಲುಪಲಿದೆ.

ತಲಶ್ಶೇರಿ, ವಡಗರ ಹಾಗೂ ಕುಯಿಲಾಂಡಿಗಳಲ್ಲಿ ವಾಣಿಜ್ಯ ನಿಲುಗಡೆ ನೀಡುವುದಕ್ಕೂ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

ಹೊಸ ವೇಳಾಪಟ್ಟಿ ಯಾವತ್ತಿನಿಂದ ಆರಂಭವಾಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದಷ್ಟು ಬೇಗ ಸೂಕ್ತ ದಿನಾಂಕ ನಿಗದಿ ಪಡಿಸಿ ಈ ಮಾರ್ಪಾಡನ್ನು ತುರ್ತಾಗಿ ಜಾರಿಗೆ ತರುವಂತೆ ಸೂಚಿಸಿ ರೈಲ್ವೆ ಮಂಡಳಿಯು ದಕ್ಷಿಣ ರೈಲ್ವೆ ಹಾಗೂ ನೈರುತ್ಯ ರೈಲ್ವೆ ವಲಯಗಳಿಗೆ ಜ.23ರಂದು ಪತ್ರ ಬರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.