ADVERTISEMENT

ಬಿಜೆಪಿ ಸರ್ಕಾರದಲ್ಲಿ ಭರಪೂರ ಅಭಿವೃದ್ಧಿ: ಅಶ್ವತ್ಥ ನಾರಾಯಣ

ಸುಬ್ರಹ್ಮಣ್ಯದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 7:00 IST
Last Updated 8 ಮಾರ್ಚ್ 2023, 7:00 IST
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಸಿ.ಎನ್. ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಸಿ.ಎನ್. ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು.   

ಸುಬ್ರಹ್ಮಣ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರವು ಜನತೆಯ ಹಿತಕ್ಕಾಗಿ ಭರಪೂರ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದೆ. ಸರ್ಕಾರಗಳ ಸಾಧನೆಗಳನ್ನು ಗುರುತಿಸಿ ಜನತೆ ಬಿಜೆಪಿಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ಈ ಬಾರಿ ರಾಜ್ಯದಲ್ಲಿ 150ಕ್ಕೂ ಅಧಿಕ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿ, ಮತ್ತೆ ಸರ್ಕಾರ ನಡೆಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಸಿ.ಎನ್. ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಬೆಂಗಳೂರು- ಮೈಸೂರು ದಶಪಥ ರಸ್ತೆ ಉದ್ಘಾಟಿಸಲಿದ್ದಾರೆ. ದಶಪಥ ರಸ್ತೆಯು ಬೆಂಗಳೂರು- ಮೈಸೂರು-ಮಡಿಕೇರಿ ಮೂಲಕ ಬಂಟ್ವಾಳ ತನಕ ವಿಸ್ತೃತವಾಗಲಿದೆ. ಈಗ ಬೆಂಗಳೂರು- ಮಂಗಳೂರು ತನಕ ರಸ್ತೆ ಕಾಮಗಾರಿ ನೆರವೇರಿದೆ. ಮುಂದೆ ಮೈಸೂರಿನಿಂದ ಮಡಿಕೇರಿ ತನಕ, ಮಡಿಕೇರಿಯಿಂದ ಬಂಟ್ವಾಳ ತನಕ ರಸ್ತೆ ಕಾಮಗಾರಿ ಅಭಿವೃದ್ಧಿಯಾಗಲಿದೆ ಎಂದರು.

ADVERTISEMENT

ಗುಣಮಟ್ಟದ ಶಿಕ್ಷಣ: ‘21ನೇ ಶತಮಾನದಲ್ಲಿ ಜ್ಞಾನಾಭಿವೃದ್ಧಿಗೆ ಒತ್ತು ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆ ಆಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ಮೂಲಕ ಶಿಕ್ಷಣ ಕ್ಷೇತ್ರ ಮತ್ತು ದೇಶದ ಜ್ಞಾನಾರ್ಜನೆಯ ಮಟ್ಟವು ಉತ್ಕೃಷ್ಟವಾಗುವಂತೆ ರೂಪಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಕೆಲವೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸದಾಗಿ ಕಾಲೇಜು ಆರಂಭಿಸಲಾಗಿದೆ ಎಂದರು.

ಕುಕ್ಕೆಗೆ ಕುಟುಂಬ ಸಮೇತರಾಗಿ ಭೇಟಿ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಕುಟುಂಬ ಸಮೇತ ಸೋಮವಾರ ಭೇಟಿ ನೀಡಿದರು.

ಬಿಳಿನೆಲೆ ಗೋಪಾಲಕೃಷ್ಣ ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿಳಿದು ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಬಂದರು. ಕ್ಷೇತ್ರಕ್ಕೆ ಬಂದ ಸಚಿವರನ್ನು ದೇವಸ್ಥಾನ ವತಿಯಿಂದ ಸ್ವಾಗತಿಸಲಾಯಿತು.

ಅವರು ಆಶ್ಲೇಷ ಪೂಜೆ ನೆರವೇರಿಸಿದರು. ಮಹಾಭಿಷೇಕ, ಮಹಾಪೂಜೆಯಲ್ಲಿ ಭಾಗಿಯಾದರು. ಬಳಿಕ ಅವರನ್ನು ದೇವಸ್ಥಾನ ವತಿಯಿಂದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಗೌರವಿಸಿದರು.

ಮೀನುಗಾರಿಕಾ ನಿಗಮ ಅಧ್ಯಕ್ಷ ಎ.ವಿ. ತೀರ್ಥರಾಮ, ದೇವಸ್ಥಾನದ ಶಿಷ್ಠಚಾರ ಅಧಿಕಾರಿ ಜಯರಾಮ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಎಇಒ ಪುಷ್ಪಲತಾ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಮೋದ್ ಕುಮಾರ್, ಎಸ್‌ಐ ಮಂಜುನಾಥ್, ಮುರಳಿ ಇದ್ದರು.

ಮಠಕ್ಕೆ ಭೇಟಿ: ಬಳಿಕ ಸಚಿವರು ಸುಬ್ರಹ್ಮಣ್ಯದ ಸಂಪುಟನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿ ಮಠಾಧೀಶ ವಿದ್ಯಾಪ್ರಸನ್ನ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಸಚಿವ ಅಶ್ವತ್ಥ ನಾರಾಯಣ ಪತ್ನಿ ಶ್ರುತಿ ಅಶ್ವತ್ಥ ನಾರಾಯಣ, ಪುತ್ರಿ ಆಕಾಂಕ್ಷಾ, ಪುತ್ರ ಅಮೋಘ್, ಸಹೋದರ ಸತೀಶ್ ಜತೆಗಿದ್ದರು.

ಶಾಲೆಗೆ ಭೇಟಿ: ಸಚಿವರು ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಗೂ ಭೇಟಿ ನೀಡಿದರು. ಈ ವೇಳೆ ಶಾಲಾ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ಸಚಿವರು ಶಾಲೆಯ ಬಗ್ಗೆ ಮಾಹಿತಿ ಪಡೆದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮಾ, ಮುಖ್ಯಗುರು ಗಣಪತಿ ಭಟ್, ಪ್ರಮುಖರಾದ ವಾಡ್ಯಪ್ಪ ಗೌಡ, ಸತೀಶ್ ಎರ್ಕ, ಲೋಕೋಪಯೋಗಿ ಇಲಾಖಾ ಎಂಜಿನಿಯರ್ ಪ್ರಮೋದ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.