ADVERTISEMENT

ಪುತ್ತೂರು: ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ವಂಚನೆ

ಎರಡು ದಿನಗಳಲ್ಲಿ ಆರೋಪಿ ಬಂಧಿಸಿ: ಶಾಸಕ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 23:48 IST
Last Updated 4 ಜುಲೈ 2025, 23:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುತ್ತೂರು (ದಕ್ಷಿಣ ಕನ್ನಡ): ಸಹಪಾಠಿ ಯುವತಿಗೆ ವಂಚಿಸಿ, ಆಕೆ ಮಗುವಿನ ತಾಯಿಯಾಗಲು ಕಾರಣನಾದ ಆರೋಪಿಯನ್ನು ಎರಡು ದಿನಗಳೊಳಗೆ ಬಂಧಿಸುವಂತೆ ಶಾಸಕ ಅಶೋಕ ಕುಮಾರ್ ರೈ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಕೋರಿದ್ದಾರೆ.

ದೂರವಾಣಿ ಮೂಲಕ ಎಸ್‌ಪಿ ಜೊತೆ ಮಾತನಾಡಿದ ಶಾಸಕರು, ‘ಆರೋಪಿಯನ್ನು ಇಷ್ಟು ದಿನ ಬಂಧಿಸದೇ ಇರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಆರೋಪಿ ಪತ್ತೆಗೆ ತಂಡ ರಚಿಸಿ, ಶೀಘ್ರ ಬಂಧಿಸಬೇಕು’ ಎಂದಿದ್ದಾರೆ.

ಏನಿದು ಪ್ರಕರಣ?: ಪುತ್ತೂರಿನ ಬಿಜೆಪಿ ಮುಖಂಡ, ನಗರಸಭಾ ಸದಸ್ಯ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ರಾವ್ ತನ್ನ ಸಹಪಾಠಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು, ಆಕೆ ಗರ್ಭ ಧರಿಸಿ, ಜೂನ್ 27ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ADVERTISEMENT

‘ಪ್ರೌಢಶಾಲೆಯಲ್ಲಿದ್ದಾಗ ಸಹಪಾಠಿಯಾಗಿದ್ದ ನಾನು ಮತ್ತು ಕೃಷ್ಣ ಪರಸ್ಪರ ಪ್ರೀತಿಸುತ್ತಿದ್ದೆವು. ಆತ ವಿವಾಹವಾಗುವುದಾಗಿ ನಂಬಿಸಿ ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ್ದ. ನಾನು ಗರ್ಭಿಣಿಯಾಗಿದ್ದೇನೆ. ಈಗ ಆರೋಪಿ ವಿವಾಹವಾಗಲು ನಿರಾಕರಿಸಿದ್ದಾನೆ’ ಎಂದು ಸಂತ್ರಸ್ತ ಯುವತಿ ಜೂನ್ 24ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು,ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ನಡುವೆ ಜೂನ್ 30ರಂದು ಸಂತ್ರಸ್ತ ಯುವತಿಯ ತಾಯಿ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ‘ಮಗಳು ಗರ್ಭಿಣಿಯಾಗಿರುವ ಸಂಗತಿಯನ್ನು ಯುವಕನೇ ನನಗೆ ‌ತಿಳಿಸಿ, ತಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದ. ಈ ವಿಚಾರವನ್ನು ಅವನ ತಂದೆಗೆ ಹೇಳಿದಾಗ, ವಿವಾಹ ಮಾಡಿಸುವುದಾಗಿ ಅವರೂ ತಿಳಿಸಿದ್ದರು. ಯುವಕನ ತಂದೆ–ತಾಯಿ, ನಾನು ಮತ್ತು ಮಗಳು ಜತೆಯಲ್ಲಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಮಗಳು ಏಳು ತಿಂಗಳ ಗರ್ಭಿಣಿಯಾಗಿದ್ದಳು, ಈ ಹಂತದಲ್ಲಿ ಗರ್ಭಪಾತ ಮಾಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಈ ನಡುವೆ ಯುವಕನ ತಾಯಿ, ನನ್ನ ಮಗನೊಂದಿಗೆ ವಿವಾಹ ಮಾಡುವುದನ್ನು ಕನಸಿನಲ್ಲೂ ಯೋಚಿಸಬೇಡಿ ಎಂದಿದ್ದರು’ ಎಂದು ಮಗಳ ಕಥೆಯನ್ನು ವಿವರಿದ್ದರು.

‘ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಪೊಲೀಸರು ಯುವಕನನ್ನು ಕರೆಸಿದ್ದರು. ಆಗ ವಿವಾಹದ ರಾಜಿ ಸಂಧಾನಕ್ಕೆ ಶಾಸಕ ಅಶೋಕ್‌ ಕುಮಾರ್‌ ರೈ ಪ್ರವೇಶವಾಯಿತು. ‘ಎಫ್ಐಆರ್ ಮಾಡಬೇಡಿ, ಜೂನ್‌ 23ಕ್ಕೆ ಯುವಕನಿಗೆ 21 ವರ್ಷ ಆದ ಬಳಿಕ ಅವರು ವಿವಾಹಕ್ಕೆ ಒಪ್ಪಿದ್ದಾರಲ್ಲ’ ಎಂದು ಶಾಸಕರು ಹೇಳಿದ್ದರು. ನಂತರ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಇತ್ಯರ್ಥಗೊಳಿಸಲಾಗಿತ್ತು. ಹುಡುಗನಿಗೆ 21 ವರ್ಷ ಆದ ನಂತರ ಅವರ ಕುಟುಂಬದವರು ಮದುವೆಗೆ ಒಪ್ಪದಿರುವುದನ್ನು ಶಾಸಕರಿಗೆ ಕರೆ ಮಾಡಿ ತಿಳಿಸಿದ್ದೆ. ನಂತರ ಬೆಳವಣಿಗೆಯಲ್ಲಿ ಆರೋಪಿ ಕೃಷ್ಣ ರಾವ್ ಕುಟುಂಬದವರು ನಮಗೆ ಬೆದರಿಕೆಯನ್ನೂ ಹಾಕಿದ್ದಾರೆ’ ಎಂದು ಹೇಳಿಕೊಂಡಿದ್ದರು.

‘ಮಗಳಿಗೆ ನ್ಯಾಯಕ್ಕಾಗಿ ಹಿಂದುತ್ವವಾದಿ ಸಂಘಟನೆಗಳ ಮುಖಂಡರಲ್ಲೂ ಮನವಿ ಮಾಡಿದ್ದೇವೆ. ಮುಖಂಡರೊಬ್ಬರು ಹುಡುಗ ಒಪ್ಪುತ್ತಿಲ್ಲ ಎಂದು ಹೇಳಿದ್ದು, ₹10 ಲಕ್ಷ ನೀಡಿದರೆ ಆಗಬಹುದಾ ಎಂದು ಕೇಳಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಇದಾಗಿ ಎರಡು ದಿನಗಳಲ್ಲಿ ಸಭೆ ನಡೆಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಒಕ್ಕೂಟದವರು, ಯುವತಿಗೆ ನ್ಯಾಯ ಸಿಗದಿದ್ದರೆ ಪ್ರತಿಭಟನೆ ನಡೆಸಲು ನಿರ್ಣಯಿಸಿದ್ದರು. ಕಾಂಗ್ರೆಸ್‌ ಮುಖಂಡರು ಸುದ್ದಿಗೋಷ್ಠಿ ನಡೆಸಿ, ಸಂತ್ರಸ್ತ ಯುವತಿಯ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದರು.

ಎಸ್‌ಡಿಪಿಐ ಗ್ರಾಮೀಣ ಘಟಕದವರು ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿ, ಯುವತಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮುಖಂಡರ ಮೌನದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಂತರ ಗುರುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ‘ಯುವಕ ಆ ಯುವತಿಯನ್ನು ಮದುವೆಯಾಗಬೇಕು, ಈ ವಿಷಯದಲ್ಲಿ ಪಕ್ಷ ಸಂತ್ರಸ್ತೆಯ ಪರವಾಗಿ ಗಟ್ಟಿಯಾಗಿ ನಿಲ್ಲುತ್ತದೆ’ ಎಂದಿದ್ದಾರೆ.

ಈ ಪ್ರಕರಣದ ಚರ್ಚೆಗೆ ಸಾಮಾಜಿಕ ಜಾಲತಾಣ ವೇದಿಕೆಯಾಗಿದೆ. ಆರೋಪಿ ಕೃಷ್ಣ ರಾವ್ ಬಂಧಿಸಬೇಕು ಎಂದು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.