ADVERTISEMENT

23ರಂದು ಜಿಲ್ಲೆಯಾದ್ಯಂತ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 4:21 IST
Last Updated 18 ಜೂನ್ 2025, 4:21 IST
ಮುಡಿಪು ಕಂಬ್ಲಪದವಿನ ದುರ್ಗಾಕಾಳಿ ದೇವಸ್ಥಾನ ವಠಾರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿದರು
ಮುಡಿಪು ಕಂಬ್ಲಪದವಿನ ದುರ್ಗಾಕಾಳಿ ದೇವಸ್ಥಾನ ವಠಾರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿದರು   

ಉಳ್ಳಾಲ: ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಆಗುತ್ತಿರುವ ತೊಂದರೆಯನ್ನು ಖಂಡಿಸಿ ಜೂನ್‌ 23ರಂದು ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳು, ಒಂದು ಮಹಾನಗರಪಾಲಿಕೆ, ಮೂರು ಪುರಸಭೆ, ಐದು ಪಟ್ಟಣ ಪಂಚಾಯಿತಿ ಕಚೇರಿಗಳ ಎದುರು ಬೆಳಿಗ್ಗೆ 10ರಿಂದ ಏಕಕಾಲಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ಇಲ್ಲಿನ ಮುಡಿಪು ಕಂಬ್ಲಪದವಿನ ಶ್ರೀ ದುರ್ಗಾಕಾಳಿ ದೇವಸ್ಥಾನ ವಠಾರದಲ್ಲಿ ಬಿಜೆಪಿ ಆಯೋಜಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ  ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಸಕ್ರಮ ಯೋಜನೆಯ ಸಭೆಗಳೇ ನಡೆಯುತ್ತಿಲ್ಲ, ಶಾಸಕರು, ತಹಶೀಲ್ದಾರ್ ಹಾಗೂ ಅಧಿಕಾರಿಗಳು ತಮಗೆ ಬೇಕಾದ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಇದರಿಂದ ಮೂಲ ಜಮೀನ್ದಾರರಿಗೆ ಜಾಗ ಕೈತಪ್ಪಿ ಹೋಗುತ್ತಿದೆ. ಹೊಸ ಕಾನೂನು ಜಾರಿಗೊಳಿಸಿ ಕನ್ವರ್ಷನ್ ಮಾಡಿದಲ್ಲಿ ಕುಮ್ಕಿ ಹಕ್ಕು ಕಸಿಯುವ ಕೆಲಸಗಳಾಗುತ್ತಿದೆ. ಇದರಿಂದಾಗಿ ಜಾಗವಿದ್ದರೂ ಮನೆ ಕಟ್ಟಲಾಗದ ಸ್ಥಿತಿಯಲ್ಲಿ ಜಮೀನುದಾರರಿದ್ದಾರೆ. ಕೋಟೆಕಾರು, ತಲಪಾಡಿಯಲ್ಲಿ ನಿವೇಶನ ಹಂಚುವಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ವೃದ್ಧಾಪ್ಯ, ಸಂದ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ ಹಣವೇ ಫಲಾನುಭವಿಗಳ ಕೈ ಸೇರುತ್ತಿಲ್ಲ. ದೂರದ ಸುಳ್ಯ, ಪುತ್ತೂರು ಭಾಗದವರು ಮನೆ ಕಟ್ಟಬೇಕಾದರೆ 9/11 ಗಾಗಿ ಮಂಗಳೂರು ಮುಡಾಗೆ ಅಲೆದಾಡುವ ಸ್ಥಿತಿಯಿದೆ. ಇವೆಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಶ್ಯಾಂ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಸಂಚಾಲಕ ಹರೀಶ್ ಕಂಜಿಪಿಲಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರದಿಂದ ವ್ಯಾಪಕ ಭ್ರಷ್ಟಾಚಾರ, ನಿರುದ್ಯೋಗ, ಅಭಿವೃದ್ಧಿ ಶೂನ್ಯದಿಂದ ಜನ ಹೈರಾಣಾಗಿದ್ದಾರೆ ಎಂದು ದೂರಿದರು.

ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಜಿಲ್ಲಾ ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್, ದಯಾನಂದ ತೊಕ್ಕೊಟ್ಟು, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ವಿಕಸಿತ ಭಾರತ ಸಂಕಲ್ಪದ ಸಹಸಂಚಾಲಕ ರೂಪ ಬಂಗೇರ, ಮೋಹನ್ ಪಿ.ಎಸ್, ನಿತೇಶ್ ಶಾಂತಿವನ, ಮಂಡಲ ಉಪಾಧ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷ ಮನೋಜ್ ಆಚಾರ್ಯ, ಕೋಶಾಧಿಕಾರಿ ಸುಮಲತಾ ಕೊಣಾಜೆ, ಕಾರ್ಯದರ್ಶಿ ರಮೇಶ್ ಬೆದ್ರೊಳಿಕೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.