ಮಂಗಳೂರು: ಶನಿವಾರ ಮಧ್ಯಾಹ್ನ ಜಪ್ಪಿನಮೊಗರು ಬಳಿ ನೇತ್ರಾವತಿ ನದಿಗೆ ಹಾರಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಜೆಪ್ಪು ಪಟ್ಲ ಬಳಿ ನದಿ ತೀರದಲ್ಲಿ ಬುಧವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹರೇಕಳ ಗ್ರಾಮದ ಕಿಶೋರ್ ಅಡ್ಯಂತಾಯ (37) ಮೃತ ವ್ಯಕ್ತಿ. ಹರೇಕಳದ ಕೊಲ್ಕೆ ಶಾಲೆಯ ಬಳಿ ತಂದೆ ಮತ್ತು ಮಗ ಇಬ್ಬರೇ ವಾಸಿಸುತ್ತಿದ್ದರು. ವಾರದಿಂದ ಕಿಶೋರ್ ನಾಪತ್ತೆಯಾಗಿದ್ದರು.
ಶನಿವಾರ ಮಧ್ಯಾಹ್ನ ಛತ್ರಿಯನ್ನು ಸೇತುವೆ ಮೇಲಿಟ್ಟು ನೀರಿಗೆ ಹಾರಿದ್ದರು. ಇದನ್ನು ವಾಹನದಲ್ಲಿ ಹೋಗುತ್ತಿದ್ದವರು ಗಮನಿಸಿ ಕಂಕನಾಡಿ ನಗರ ಠಾಣೆ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದ್ದರು.
ಅದೇ ದಿನ ನೇತ್ರಾವತಿ ಸೇತುವೆಗೆ ಕಬ್ಬಿಣದ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ ಕಾಮತ್ ಚಾಲನೆ ನೀಡಿದ್ದರು. ಕಾರ್ಯಕ್ರಮ ಮುಗಿದ ಕೆಲ ಸಮಯದ ಬಳಿಕ ಸೇತುವೆ ಮೇಲೆ ಛತ್ರಿ ಪತ್ತೆಯಾಗಿದ್ದರಿಂದ ಗೊಂದಲಕ್ಕೆ ಕಾರಣವಾಗಿತ್ತು. ಎರಡು ದಿನಗಳ ಬಳಿಕ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.