ಬಾಲಕಿಯ ಚಿಕಿತ್ಸೆಗೆ ನೆರವು ಕೋರಿದ ಬಂಟ್ವಾಳದ ಫಯಾಜ್ ಮಸೂದ್ ಹಾಗೂ ತಂಡದವರು
ಮಂಗಳೂರು: ದೇವಸ್ಥಾನದ ಅರ್ಚಕ ರೊಬ್ಬರ ಐದು ವರ್ಷ ವಯಸ್ಸಿನ ಮಗುವಿಗೆ ಅಸ್ಥಿ ಮಜ್ಜೆ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಗಾಗಿ ಕೇವಲ 15 ಗಂಟೆಗಳಲ್ಲಿ ₹75 ಲಕ್ಷ ನೆರವು ಸಂಗ್ರಹಿಸುವ ಮೂಲಕ ಸಮಾಜ ಸೇವಕ ಬಂಟ್ವಾಳದ ಫಯಾಜ್ ಮಸೂದ್ ಹಾಗೂ ಅವರ ತಂಡ ಕರಾವಳಿಯ ಸೌಹಾರ್ದ ಪರಂಪರೆಗೆ ಸಾಕ್ಷಿ ಒದಗಿಸಿದೆ.
ಬಂಟ್ವಾಳ ತಾಲ್ಲೂಕಿನ ಐದು ವರ್ಷ ವಯಸ್ಸಿನ ಹೆಣ್ಣು ಮಗುವಿಗೆ ತುರ್ತಾಗಿ ಅಸ್ಥಿ ಮಜ್ಜೆ ಟ್ರಾನ್ಸ್ಪ್ಲಾಂಟ್ ಮಾಡಿಸಬೇಕು ಎಂದು ಬೆಂಗಳೂರಿನ ನಾರಾಯಣ ಆರೋಗ್ಯ ಸಂಸ್ಥೆಯ ವೈದ್ಯರು ಸೂಚಿಸಿದ್ದರು. ಇದಕ್ಕೆ ಸುಮಾರು ₹40 ಲಕ್ಷದಿಂದ ₹50 ಲಕ್ಷದಷ್ಟು ವೆಚ್ಚ ಬರಬಹುದು ಎಂದು ತಿಳಿಸಿದ್ದರು. ಮಗುವಿನ ಚಿಕಿತ್ಸೆಗಾಗಿ ಈಗಾಗಲೇ ಸುಮಾರು ₹7 ಲಕ್ಷದಷ್ಟು ಹಣ ವೆಚ್ಚ ಮಾಡಿರುವ ಕುಟುಂಬಕ್ಕೆ ಇಷ್ಟೊಂದು ಹಣ ಹೊಂದಿಸುವುದು ಅಸಾಧ್ಯವಾಗಿತ್ತು.
‘ನಮ್ಮ ಕಷ್ಟವನ್ನು ಅರಿತ ಸ್ನೇಹಿತರೊಬ್ಬರು ಫಯಾಜ್ ಅವರ ನಂಬರ್ ಕೊಟ್ಟಿದ್ದರು. ಗ್ರಾಮದ 10 ಮಂದಿ ಹೋಗಿ ಅವರನ್ನು ಭೇಟಿಯಾದೆವು. ಅದಾದ ಬಳಿಕ ಅವರು ನಮ್ಮ ಮನೆಗೆ ಬಂದು, ಮಗಳನ್ನು ಭೇಟಿಮಾಡಿ, ವಿಡಿಯೊ ಮಾಡಿಕೊಂಡರು. ಮರುದಿನ ಸಂಜೆ 6 ಗಂಟೆಗೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು. ಆದರೆ ಈ ಪ್ರಮಾಣದಲ್ಲಿ ನೆರವು ಲಭಿಸುತ್ತದೆ ಎಂದು ಭಾವಿಸಿರಲಿಲ್ಲ’ ಎಂದು ಬಾಲಕಿಯ ತಂದೆ ಹಿರಣ್ಯಾಕ್ಷ ತಿಳಿಸಿದರು.
‘ಕಟುಂಬದವರ ಸಂಕಷ್ಟವನ್ನು ಮನಗಂಡು, ಜೂನ್ 30ರಂದು ಸಂಜೆ 6 ಗಂಟೆ ವೇಳೆಗೆ ನಾನು ನೆರವು ಯಾಚಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದೆ. ಮರುದಿನ ಬೆಳಿಗ್ಗೆ 10.30ರ ವೇಳೆಗೆ ₹75 ಲಕ್ಷ ಸಂಗ್ರಹವಾಗಿತ್ತು’ ಎಂದು ಫಯಾಜ್ಪ್ರತಿಕ್ರಿಯಿಸಿದ್ದಾರೆ.
‘ಅವರು ನಮ್ಮ ಧರ್ಮ ನೋಡಲಿಲ್ಲ, ನಮ್ಮಿಂದ ಏನನ್ನೂ ಕೇಳಿಲ್ಲ, ಬದಲಿಗೆ ಎಷ್ಟು ದಿನದೊಳಗೆ ನಿಮಗೆ ಹಣ ಬೇಕಾಗಿದೆ ಎಂದಷ್ಟೇ ಕೇಳಿದ್ದರು’ ಎಂದು ಹಿರಣ್ಯಾಕ್ಷ ತಿಳಿಸಿದರು.
ಮಗುವಿನ ಕುಟುಂಬದವರು ಈಗಾಗಲೇ ಬೆಂಗಳೂರಿಗೆ ತೆರಳಿದ್ದು, ಒಂದೆರಡು ದಿನಗಳಲ್ಲಿ ಚಿಕಿತ್ಸೆ ಆರಂಭವಾಗುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.